ಎಐಸಿಸಿ ಅಧ್ಯಕ್ಷೀಯ ಚುನಾವಣೆ ಹೈಕಮಾಂಡ್ ತಲೆ ನೋವು ಹೆಚ್ಚಿಸಿದ ಶಶಿ ತರೂರ್ ಸ್ಪರ್ಧೆ
ನವದೆಹಲಿ (ಅ.05) ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಹೈಕಮಾಂಡ್ ಲೆಕ್ಕಾಚಾರಗಳು ಉಲ್ಟಾ ಆಗುತ್ತಲೇ ಇದೆ. ಇದೀಗ ಅಂತಿಮ ಹಂತದಲ್ಲಿ ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಖರ್ಗೆ ಕಣಕ್ಕಿಳಿದಿದ್ದಾರೆ. ಖರ್ಗೆಗೆ ಪ್ರತಿಸ್ಪರ್ಧಿಯಾಗಿರುವ ಶಶಿ ತರೂರ್ ಇದೀಗ ಹೈಕಮಾಂಡ್ ತಲೆನೋವು ಹೆಚ್ಚಿಸಿದ್ದಾರೆ. ಚುನಾವಣಾ ನಾಮಪತ್ರ ಸಲ್ಲಿಕೆಗೂ ಮುನ್ನ ಇದ್ದ ಹಲವು ಸಮಸ್ಯೆಗಳನ್ನು ನಿವಾರಿಸಿದ ಕಾಂಗ್ರೆಸ್ ಹೈಕಮಾಂಡ್ ಇದೀಗ ಅಧ್ಯಕ್ಷ ಚುನಾವಣೆ ಸುಗಮವಾಗಿ ನಡೆಯಲು ಹಲವು ಕಟ್ಟು ನಿಟ್ಟಿನ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಇತ್ತ ಖರ್ಗೆ ಪರ ಬೆಂಬಲ ಹೆಚ್ಚಾಗುತ್ತಿದೆ. ಕೇರಳ ಸೇರಿದಂತೆ ಹಲವು ಪ್ರದೇಶ ಕಾಂಗ್ರೆಸ್ ಖರ್ಗೆಗೆ ಬೆಂಬಲ ಸೂಚಿಸಿದೆ.
ಇದರ ನಡುವೆ ಧೈರ್ಯದಿಂದ ಮುನ್ನುಗ್ಗುತ್ತಿರುವ ಶಶಿ ತರೂರ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಕುರಿತು ಶಶಿ ತರೂರ್ ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಕೇಳಿಕೊಳ್ಳಿ ಎಂದು ರಾಹುಲ್ ಗಾಂಧಿಗೆ ಹೇಳಲಾಗಿತ್ತು. ಆದರೆ ಈ ಮನವಿಯನ್ನು ನಿರಾಕರಿಸಿದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಅತ್ಯವಶ್ಯಕ ಎಂದು ರಾಹುಲ್ ಹೇಳಿದ್ದರು.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಸ್ಪರ್ಧಿಸಿರುವ ಶಶಿ ತರೂರ್ ಮಂಗಳವಾರ ಕೇರಳಕ್ಕೆ ಭೇಟಿ ನೀಡಿದ್ದಾರೆ. ಕೇರಳದಲ್ಲಿ ಅಧ್ಯಕ್ಷ ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ತರೂರ್ಗೆ ಭಾರಿ ಹಿನ್ನಡೆಯಾಗಿತ್ತು. ಕಾರಣ ಕೇರಳ ಕಾಂಗ್ರೆಸ್ ಬಹಿರಂಗವಾಗಿ ಮಲ್ಲಿಕಾರ್ಜುನ ಖರ್ಗೆಗೆ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಈ ಮೂಲಕ ಗಾಂಧಿ ಕುಟುಂಬಕ್ಕೆ ನಿಷ್ಠೆ ಪ್ರದರ್ಶಿಸಿತ್ತು. ಆದರೆ ಕಾಂಗ್ರೆಸ್ ಯುವ ಕಾರ್ಯಕರ್ತರು, ನಾಯಕರು ತರೂರ್ನತ್ತ ಒಲವು ತೋರಿದ್ದಾರೆ. ಜಿ23 ನಾಯಕರಲ್ಲೂ ಇದೀಗ ಗೊಂದಲ ಸೃಷ್ಟಿಯಾಗಿದೆ. ಕೆಲವರು ಖರ್ಗೆ ಪರ ಬ್ಯಾಟ್ ಬೀಸಿದ್ದರೆ, ಮತ್ತೆ ಕೆಲವರು ತರೂರ್ ಪರ ಬ್ಯಾಟ್ ಬೀಸಿದ್ದಾರೆ.