ಗೋಲಿಬಾರ್ ಪ್ರಕರಣ ಪೊಲೀಸ್ ಆಯುಕ್ತ ಡಾ| ಹರ್ಷ ರನ್ನು ವಜಾಗೊಳಿಸಿ ವೆಲ್ಪೇರ್ ಪಾರ್ಟಿ ಒತ್ತಾಯ.
ಮಂಗಳೂರು : (ಜ.03) ಮಂಗಳೂರಿನ ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ಪೌರತ್ವ ಕಾಯಿದೆಯ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡ ಅಮಾನುಷ ಕೃತ್ಯವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಎಂದು ವೆಲ್ಪೇರ್ ಫೌಂಡೇಶನ್ ಸಂಚಾಲಕ ತಪ್ಲೀಲ್ ಹೇಳಿದರು.
ನಗರದ ತೊಕ್ಕೋಟಿನಲ್ಲಿ ವೆಲ್ಫೇರ್ ಪಕ್ಷದ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪೊಲೀಸ್ ಇಲಾಖೆಗೆ ಮಂಗಳೂರು ಸಣ್ಣ ಗುಂಪು ಒಂದನ್ನು ನಿಯಂತ್ರಿಸಲು ವಿಫಲವಾಗಿ ಪರಿಸ್ಧಿತಿ ಹದಗೆಡಲು ಪೊಲೀಸ್ ಆಯುಕ್ತರೇ ನೇರ ಕಾರಣ, ಸರಕಾರ ಕೂಡಲೇ ಪೋಲೀಸರ ಅಮಾನುಷ ಕೃತ್ಯದಿಂದ ಬಲಿಯಾದ ಇಬ್ಬರು ಅಮಾಯಕರ ಕುಟುಂಬಸ್ಥರಿಗೆ ಪರಿಹಾರ ರೂಪದಲ್ಲಿ ಕರ್ನಾಟಕ ಸರಕಾರವು ತಲಾ ರೂ. 25 ಲಕ್ಷ ನೀಡಬೇಕು ಎಂದು ಅಭಿಪ್ರಾಯ ಪಟ್ಟರು. ಇದೇ ವೇಳೆ, ಭಾರತೀಯ ಸಂವಿಧಾನದ ಪರಿಚ್ಛೇದ 14, 15 ಮತ್ತು 21 ರ ಆಶಯಗಳಿಗೆ ವಿರುದ್ಧ ರೂಪಿಸಲಾಗಿರುವ ಪೌರತ್ವ ಕಾಯಿದೆಯನ್ನು ಯಾವುದೇ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ ಎಂದು ಎಸ್.ಐ.ಓ ಆಫ್ ಇಂಡಿಯಾ ರಾಷ್ಟ್ರಧ್ಯಕ್ಷ ಲಬೀದ್ ಶಾಫಿ ತೀವ್ರವಾಗಿ ಕಾಯ್ದೆಯನ್ನು ಬಹಿಷ್ಕರಿಸಿದರು. ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಗೋಲಿಬಾರ್ ಗೆ ಆದೇಶಿಸಿ ಇಬ್ಬರು ಅಮಾಯಕರ ಬಲಿಗೆ ನೇರ ಕಾರಣ ಕರ್ತರಾಗಿರುವ ಮಂಗಳೂರು ಕಮಿಷನರ್ ಡಾ| ಹರ್ಷ ಕುಮಾರ್ ಇವರನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ಒಟ್ಟು ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕೆಂದು ವೆಲ್ಪೇರ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಸರ್ಫರಾಝ್ ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ದಿವಾಕರ್ ರಾವ್ ಜಿಲ್ಲಾ ಸಮಿತಿ ಸದಸ್ಯರು, ವೆಲ್ಪೇರ್ ಪಾರ್ಟಿ ದ.ಕ, ಸಾಮಾಜಿಕ ಕಾರ್ಯಕರ್ತ ಇಸ್ಮತ್ ಪಜೀರ್, ಫಝಲ್ ಪಿಲಾರ್ ಫ್ರೆಟರ್ನಿಟಿ ಮೂವ್ ಮೆಂಟ್ ಉಳ್ಳಾಲ, ಮುಹಮ್ಮದ್ ಸೈಫ್ ಕಾರ್ಯದರ್ಶಿ, ವೆಲ್ಪೇರ್ ಪಾರ್ಟಿ ಉಳ್ಳಾಲ ಮತ್ತು ಕಾರ್ಯಕರ್ತರು ಪ್ರತಿಭಟನ ಸಭೆಯಲ್ಲಿ ಉಪಸ್ದಿತರಿದ್ದರು. ಫೈಝಲ್ ಬೆಂಗರೆ ಕಾರ್ಯಕ್ರಮ ನಿರೂಪಿಸಿದರು. ವೆಲ್ಪೇರ್ ಪಾರ್ಟಿ ಉಳ್ಳಾಲ ಅಧ್ಯಕ್ಷ ಹನೀಫ್ ತಲಪಾಡಿ ಧನ್ಯವಾದ ಸಮರ್ಪಿಸಿದರು.