ಗೋಡ್ಸೆ ಮತ್ತು ಮೋದಿ ಸಿದ್ಧಾಂತ ಒಂದೇ : ಕೇರಳದಲ್ಲಿ ರಾಹುಲ್ ಗಾಂಧಿ
ವಯನಾಡ್ : (ಜ.29) ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಒಂದೇ ಸಿದ್ಧಾಂತವನ್ನು ನಂಬಿದವರು. ವ್ಯತ್ಯಾಸವೆಂದರೆ ತಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಹೇಳಲು ನರೇಂದ್ರ ಮೋದಿಗೆ ಧೈರ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು. ಹುತಾತ್ಮರ ದಿನದಂದು ತಮ್ಮ ಲೋಕಸಭಾ ಕ್ಷೇತ್ರ ವಯನಾಡಿನ ಕಲ್ಪೆಟ್ಟದಲ್ಲಿ ‘ಸಂವಿಧಾನ ಉಳಿಸಿ’ ಜಾಥಾದಲ್ಲಿ ಪಾಲ್ಗೊಂಡ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾಥುರಾಮ್ ಗೋಡ್ಸೆ ಯಾರನ್ನೂ ಇಷ್ಟಪಡುತ್ತಿರಲಿಲ್ಲ, ಆತನಿಗೆ ಯಾರ ಬಗ್ಗೆಯೂ ಕಾಳಜಿ ಇರಲಿಲ್ಲ, ತನ್ನನ್ನೇ ತಾನು ನಂಬುತ್ತಿರಲಿಲ್ಲ. ಈ ಕಾರಣಕ್ಕೆ ಆತ ಮಹಾತ್ಮ ಗಾಂಧಿಯನ್ನು ಕೊಂದ. ಇದೇ ರೀತಿ ನಮ್ಮ ಪ್ರಧಾನಿ ಕೂಡ ಅವರನ್ನು ಮಾತ್ರ ಪ್ರೀತಿಸುತ್ತಾರೆ, ಅವರನ್ನು ಮಾತ್ರ ನಂಬುತ್ತಾರೆ, ಎಂದು ದೂರಿದರು. ನೀವು ಗಮನಿಸಿ, ನರೇಂದ್ರ ಮೋದಿಗೆ ನಿರುದ್ಯೋಗ ಮತ್ತು ಉದ್ಯೋಗದ ಬಗ್ಗೆ ಏನೇ ಪ್ರಶ್ನೆಗಳನ್ನು ಕೇಳಿ ಅವರು ತಕ್ಷಣ ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಾರೆ. ಎನ್ಆರ್ಸಿ ಮತ್ತು ಸಿಎಎಯಿಂದ ಉದ್ಯೋಗ ಸಿಗುವುದಿಲ್ಲ. ಕಾಶ್ಮೀರದ ಪರಿಸ್ಥಿತಿ ಮತ್ತು ಹೊತ್ತಿ ಉರಿಯುತ್ತಿರುವ ಅಸ್ಸಾಂನಿಂದ ನಮ್ಮ ಯುವ ಜನರಿಗೆ ಉದ್ಯೋಗ ಸಿಗಲಾರದು, ಎಂದು ಅವರು ವಿವರಿಸಿದರು.