ಜಮ್ಮು ಕಾಶ್ಮೀರದಲ್ಲಿ ಮೃತಪಟ್ಟ ಕುಂದಗೋಳದ ಯೋಧ ಈಶ್ವರಪ್ಪ ಸೂರಣಗಿ
ಕುಂದಗೋಳ : (ಫೆ.01) ತಾಲೂಕಿನ ಬರ್ದವಾಡ ಗ್ರಾಮದ ಯೋಧ ಈಶ್ವರಪ್ಪ ಯಲ್ಲಪ್ಪ ಸೂರಣಗಿ (45) ಜಮ್ಮು-ಕಾಶ್ಮೀರದಲ್ಲಿ ಮೃತಪಟ್ಟಿದ್ದಾರೆ. ಕಳೆದ 21 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಈಶ್ವರಪ್ಪ ಇದೇ 7 ರಂದು ಊರಿಗೆ ಬಂದು ಹೋಗಿದ್ದರು. ಪ್ರಸ್ತುತ ಜಮ್ಮುವಿನ ಸಿ.ಆರ್.ಪಿ.ಎಫ್. ಬೆಟಾಲಿಯನ್ ನಲ್ಲಿದ್ದರು. ಇನ್ನ ಕೆಲವು ತಿಂಗಳುಗಳಲ್ಲೇ ನಿವೃತ್ತಿ ಕೂಡ ಹೊಂದಲಿದ್ದರು. ಅಷ್ಟರಲ್ಲೇ ಸಾವನ್ನಪ್ಪಿರುವ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಯೋಧನ ಸಾವಿನ ಸುದ್ದಿ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹೆಂಡತಿ, ಇಬ್ಬರು ಮಕ್ಕಳು ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ. ಯೋಧನ ಸಾವಿನ ಸುದ್ದಿ ತಿಳಿದು ಕುಂದಗೋಳ ತಹಶೀಲ್ದಾರ ಬಸವರಾಜ ಮೆಳವಂಕಿ ಯೋಧನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ನಾಳೆ ದೆಹಲಿಗೆ ಮೃತ ದೇಹ ಆಗಮಿಸಲಿದ್ದು, ಅಲ್ಲಿಂದ ಗ್ರಾಮಕ್ಕೆ ಎಷ್ಟು ಗಂಟೆಗೆ ಬರಬಹುದು ಎಂದು ಗೊತ್ತಾಗುತ್ತದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.