ಸಹಕಾರ ಇದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸಿ ಯಶಸ್ಸು ಸಾಧಿಸಬಹುದು. : ಡಾ. ಗಾಯತ್ರೀ ಗೀತಾಪ್ರಕಾಶ್
ಮಂಗಳೂರು : (ಏ.11) ಕೊರೋನಾದಂತಹ ಮಹಾ ಮಾರಿಯಿಂದ ದೇಶದ ವ್ಯವಸ್ಥೆಯೇ ಅಡಿಮೇಲಾಗಿರುವ ಸಂದರ್ಭದಲ್ಲಿ ಒಂದು ವ್ಯವಸ್ಥೆಯನ್ನು ಸರಿತೂಗಿಸಿಕೊಂಡು ದಡ ಮುಟ್ಟಬೇಕಾದರೆ ಮಾಜಿ ಜಿಲ್ಲಾ ರಾಜ್ಯಪಾಲರುಗಳು, ಜಿಲ್ಲಾ ಕ್ಯಾಬಿನೆಟ್ ಸದಸ್ಯರು, ಎಲ್ಲಾ ಲಯನ್ಸ್ ಬಂಧುಗಳು ನೀಡಿದ ಅನನ್ಯ ಸಹಕಾರವೇ ಕಾರಣ . ಇಂತಹ ಸಹಕಾರ ದೊರೆತರೆ ಯಾವುದೇ ಕಠಿಣ ಪರಿಸ್ಥಿತಿಯಲ್ಲಿಯೂ ಸಾಧನೆ ಮಾಡಲು ಸಾಧ್ಯ ಎಂದು ಬಂಟವಾಳದ ಬಂಟರ ಭವನದಲ್ಲಿ ಜಿಲ್ಲಾ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿದ ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಡಾ.ಗಾಯತ್ರಿ ಗೀತಾಪ್ರಕಾಶ್ ಹೇಳಿದರು. ದೀಪ ಬೆಳಗಿಸುವ ಮೂಲಕ ಅಂಧಕಾರವನ್ನು ದೂರ ಮಾಡಿ ಎಲ್ಲರಿಗೂ ಬೆಳಕು ಸಿಗುವಂತಾಗಲಿ. ಕಠಿಣ ಪರಿಸ್ಥಿತಿಯಲ್ಲಿಯೂ ಲಯನ್ಸ್ ಬಂಧುಗಳು ನೀಡಿದ ಸಹಕಾರದಿಂದ ಒಳ್ಳೆಯ ಗವರ್ನರ್ ಎಂದು ನಿಮ್ಮೆದುರು ನಿಲ್ಲಲು ಅವಕಾಶವಾಗಿದೆ. ಪೂರ್ವಾಗ್ರಹ ಪೀಡಿತರಾಗದೆ ಎಲ್ಲರಲ್ಲಿಯೂ ಒಳ್ಳೆಯತನವನ್ನು ಕಂಡರೆ ನಮಗೆ ಸೋಲಿಲ್ಲ ಎಂದು ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಸೀತಾರಾಮ ಎಂ.ಆರ್ ಮಾತನಾಡಿ ನಿಸ್ವಾರ್ಥ ಸೇವೆ ಮಾಡಿದರೆ ಖಂಡಿತಾ ಫಲ ಸಿಗುತ್ತದೆ ಎನ್ನುವುದಕ್ಕೆ ಡಾ. ಗೀತಾಪ್ರಕಾಶ್ ಸಾಕ್ಷಿಯಾಗಿದ್ದಾರೆ. ಲಯನ್ಸ್ ಸೇವಾ ಸಂಸ್ಥೆಯು ಎಲ್ಲರೂ ಮೆಚ್ಚುಂತಹ, ಎಲ್ಲರ ಮನ ಮುಟ್ಟುವಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಎಲ್ಲಾ ಲಯನ್ ಗಳೂ ನಿಯತ್ತಿನಿಂದ ಸಹಕಾರ ನೀಡುತ್ತಿರುವುದು ಈ ಸಾಧನೆಗಳಿಗೆ ಸ್ಪೂರ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಗವರ್ನರ್ ಡಾ. ಗೀತಾಪ್ರಕಾಶ್ ಅವರು ಮಾತನಾಡಿ ಒಬ್ಬ ನಾಯಕನಾದವನಿಗೆ ನಿರ್ಧಿಷ್ಠ ಸಾಧನೆ ಮಾಡುವ ಗುರಿ ಇರುತ್ತದೆ. ಅದರಲ್ಲಿ ಯಶಸ್ಸನ್ನು ಸಾಧಿಸುವ ಛಲವನ್ನು ಹೊಂದಿರುತ್ತಾನೆ. ಅದಕ್ಕಾಗಿಯೇ ಮನಸ್ಸನ್ನು ಕೇಂದ್ರಿಕರಿಸುತ್ತಾನೆ ಆದರೆ, ಅದರಿಂದ ತೃಪ್ತಿ ಸಿಗುತ್ತದೆ ಎನ್ನುವ ಭರವಸೆಯಿರುವುದಿಲ್ಲ. ಆದರೆ ನಾನು ಜಿಲ್ಲಾ ಗವರ್ನರ್ ಆದ ಪ್ರಾರಂಭದಲ್ಲಿಯೇ ಕೊರೋನಾ ಕಾರಣದಿಂದ ಎಲ್ಲರೂ ಕಂಗಾಲಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮುಂದೇನು ಎನ್ನುವುದೇ ತಿಳಿಯದ ಪರಿಸ್ಥಿತಿ. ಆದರೂ ನಮ್ಮ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದಿದೆ. ಹೊಸ ನಾಲ್ಕು ಕ್ಲಬ್ ಗಳು, ಎರಡು ಲಿಯೋ ಕ್ಲಬ್ ಗಳು ಹೊಸ ಸದಸ್ಯರುಗಳ ಸೇರ್ಪಡೆ, ವಾರ್ಷಿಕ ಕಾರ್ಯಕ್ರಮಗಳು ಎಲ್ಲವನ್ನೂ ಮಾಡಿದ್ದೇವೆ. ನಿಮ್ಮೆಲ್ಲರಿಂದ ಒಳ್ಳೆಯ ಗವರ್ನರ್ ಎಂದು ಪ್ರಶಂಸೆಗಳು ಸಿಗುತ್ತದೆ ಎಂದರೆ ನಾನು “ಸಂತೃಪ್ತಿ” ಹೊಂದಿರುವ ಗವರ್ನರ್ ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ನಾಗರಾಜ್ ಬಾಯರಿ, ಮಾಜಿ ಅಂತರಾಷ್ಟ್ರೀಯ ನಿರ್ದೇಶಕ ವಿ.ವಿ ಕೃಷ್ಣ ರೆಡ್ಡಿಯವರು ಶುಭಹಾರೈಸಿದರು. ಪ್ರಥಮ ಉಪರಾಜ್ಯಪಾಲರಾದ ವಸಂತ ಶೆಟ್ಟಿ, ಎರಡನೇ ಉಪ ರಾಜ್ಯಪಾಲರಾದ ಸಂಜೀತ್ ಶೆಟ್ಟಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಸಿ.ಪಿ.ದಿನೇಶ್, ಜಿಲ್ಲಾ ಸಂಪುಟ ಕೋಶಾಧಿಕಾರಿ ಮೊಹಮ್ಮದ್ ಇಕ್ಬಾಲ್ , ರಾಜ್ಯಪಾಲರ ಸಂಪರ್ಕಾಧಿಕಾರಿ ಮಂಗೇಶ್ ಭಟ್, ರಾಜ್ಯಪಾಲರ ಸಂಯೋಜಕರು ಅರುಣಾ ಎಸ್ ಶೆಟ್ಟಿ, ಸಂಪುಟ ಸಂಯೋಜಕ ಜಿ.ಆರ್.ಶೆಟ್ಟಿ , ಲಿಯೋ ಕ್ಲಬ್ ಜಿಲ್ಲಾ ಅಧ್ಯಕ್ಷೆ ಶಿಬಾನಿ ಶೆಟ್ಟಿ, ಪ್ರಾಂತೀಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಆಯೋಜನಾ ಸಮಿತಿ ಕೋಶಾಧಿಕಾರಿ ಅನಿಲ್ ಕುಮಾರ್ ಸಹಕರಿಸಿದರು ಸೌಜನ್ಯ ಹೆಗ್ಡೆ ಮತ್ತು ಅರವಿಂದ ಶೆಣೈ ಯವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಸಮಾವೇಶ ಆಯೋಜನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿಯವರು ವಂದಿಸಿದರು.