ಪೊಲೀಸರು ಆರೆಸ್ಸೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ, ಶಾಸಕಿ ಸೌಮ್ಯಾರೆಡ್ಡಿ ಆರೋಪ
ಬೆಂಗಳೂರು : (ಜ.17) ನಗರದ ಪೊಲೀಸರು ಆರೆಸ್ಸೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದು, ಸಿಎಎ, ಎನ್ಆರ್ಸಿ ವಿರುದ್ದದ ಹೋರಾಟಕ್ಕೆ ಅನುಮತಿ ನೀಡುತ್ತಿಲ್ಲವೆಂದು ಶಾಸಕಿ ಸೌಮ್ಯಾರೆಡ್ಡಿ ಆರೋಪಿಸಿದ್ದಾರೆ. ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಪುರಭವನ ಹಾಗೂ ಸ್ವಾತಂತ್ರ ಉದ್ಯಾನವನ ಹೊರತು ಪಡಿಸಿ ನಗರದ ಬೇರೆಡೆ ಸಿಎಎ, ಎನ್ಆರ್ಸಿ ವಿರುದ್ಧದ ಹೋರಾಟಕ್ಕೆ ಅನುಮತಿ ನೀಡುತ್ತಿಲ್ಲ. ನಮ್ಮ ಹಕ್ಕಗಳು ದಮನವಾಗುತ್ತಿವೆ ಎಂದರು.
ಸಿಎಎ ವಿಚಾರವಾಗಿ ನಗರದ ಜ್ಯೋತಿನಿವಾಸ್ ಕಾಲೇಜು, ಯಲಹಂಕದ ಸೃಷ್ಟಿ ಕಾಲೇಜಿನ ವಿದ್ಯಾರ್ಥಿಗಳನ್ನು ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರು ಬೆದರಿಸುವಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದು, ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ದ ಕ್ರಮ ಕೈಗೊಳ್ಳಬಲ್ಲರೇ ಎಂದು ಅವರು ಪ್ರಶ್ನಿಸಿದರು.
ಸಿಎಎ, ಎನ್ಆರ್ಸಿ, ಎನ್ಪಿಆರ್ ಕಾಯ್ದೆಗಳಿಂದ ಎಲ್ಲ ಸಮುದಾಯಗಳಿಗೂ ಯಾವ ರೀತಿಯಲ್ಲಿ ತೊಂದರೆಯಾಗಲಿದೆ ಎಂಬುದನ್ನು ಜನ ಸಾಮಾನ್ಯರಿಗೆ ತಿಳಿಸಲು ಅನುಕೂಲವಾಗುವಂತೆ ಕೆಪಿಸಿಸಿ ವತಿಯಿಂದ ಕರಪತ್ರ ಹೊರಡಿಸಬೇಕು. ಹಾಗೂ ನಾಳೆಯಿಂದಲೇ ಮನೆ ಮನೆಗೆ ಜಾಗೃತಿ ಮೂಡಿಸಲು ತೆರಳಬೇಕೆಂದು ಅವರು ಮನವಿ ಮಾಡಿದರು.