ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ : ಡಾ.ಜಿ. ಪರಮೇಶ್ವರ್
ಬೆಂಗಳೂರು : (ಡಿ.28) ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳಿಕೊಳ್ಳುತ್ತಿದ್ದ ಬಿಜೆಪಿಯೇ ಒಂದೊಂದು ರಾಜ್ಯದಿಂದ ಮುಕ್ತವಾಗಿ ಹೋಗುತ್ತಿದೆ. ಮತ್ತೊಮ್ಮೆ ದೊಡ್ಡ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಕಳೆದ ಐದೂವರೆ ವರ್ಷದಿಂದ ಕಳಪೆ ಆಡಳಿತ ನೀಡುವ ಜೊತೆಗೆ ದೇಶ ಒಡೆಯುವ ಕೆಲಸ ಮಾಡುತ್ತಿದೆ. ಪೌರತ್ವ ಕಾಯ್ದೆ ತರುವ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಹೊರಡಿದೆ. ಇದನ್ನು ಇಡೀ ದೇಶವೇ ವಿರೋಧಿಸುತ್ತಿದೆ. ನಮ್ಮದು ಸರ್ವಧರ್ಮ ಸಮನ್ವಯ ದೇಶ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿಯೇ ನಮ್ಮ ದೇಶವನ್ನು ಹಿಂದೂ ದೇಶ ಎಂದು ಘೋಷಿಸದೇ ಭಾರತ ದೇಶ ಎಂದು ಹೇಳಲಾಯಿತು. ಎಲ್ಲ ಧರ್ಮಿಯರಿಗೂ ಇಲ್ಲಿ ಸಮಾನ ಅವಕಾಶ ನೀಡುವುದು ಇದರ ಉದ್ದೇಶವಾಗಿತ್ತು. ಪಾಕಿಸ್ಥಾನವನ್ನು ಇಸ್ಲಾಮಿಕ್ ದೇಶವೆಂದೇ ಘೋಷಿಸಿಕೊಂಡು ಒಂದು ಧರ್ಮಕ್ಕೆ ಸಿಮೀತಗೊಳಿಸಿಕೊಂಡರು. ಈಗ ಬಿಜೆಪಿಯೂ ಸಹ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿದೆ. ಇದನ್ನು ವಿರೋಧಿಸಿದವರ ಮೇಲೆ ಗೂಂಡಾಗಿರಿ ಮಾಡಿ ಹಲ್ಲೆ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ವಿರೋಧಿಸಿದರು.
ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆಯಲು ನಿರ್ಮಾಣವಾದ ಪಕ್ಷವೇ ಕಾಂಗ್ರೆಸ್. ಈ ಸಂಘಟನೆ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಇಷ್ಟು ದೊಡ್ಡ ಇತಿಹಾಸ ಇರುವ ದೊಡ್ಡ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ, ಅಭಿವೃದ್ಧಿಗಾಗಿ ಬೆಳೆದ ಪಕ್ಷವಿದು. ಜಾತಿ-ಧರ್ಮ ಮೀರಿ ಬೆಳೆಯಬೇಕೆಂದು ಸಂವಿಧಾನದಲ್ಲಿ ಹೇಳಲಾಗಿದೆ. ಅಂತೆಯೇ ನಮ್ಮ ಪಕ್ಷ ಆ ತತ್ವ ಸಿದ್ಧಾಂತದಂತೆ ನಡೆದುಕೊಂಡು ಬಂದಿದೆ. ಪಂಚವಾರ್ಷಿಕ ಯೋಜನೆ ಹಾಕುವ ಮೂಲ ನೆಹರು ಅವರು ಈ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ದೇಶಕಟ್ಟಲು ಯುವಕರು ಶಿಕ್ಷಿತರಾಗಬೇಕೆಂದು ಶಿಕ್ಷಣಕ್ಕೆ ಆದ್ಯತೆ ಕೊಡಲಾಗಿದೆ. ಕೈಗಾರಿಕಾ ಕ್ರಾಂತಿ, ಆರೋಗ್ಯ ಸೇರಿ ಹಲವು ಮೂಲ ಅವಶ್ಯಕತೆಗೆ ಆದ್ಯತೆ ನೀಡಲಾಯಿತು.
ಪ್ರಸ್ತುತ ಬಿಜೆಪಿಯ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಆದರೆ ದೇಶದ ಅಭಿವೃದ್ಧಿಗೆ ನಿಮ್ಮ ಆಧ್ಯತೆ ಏನು? ದೇಶದ ಯುವಕರಿಗೆ ಉದ್ಯೋಗ ಕಲ್ಪಿಸುವ ಶಿಕ್ಣಣ ಕೊಡುವಿರಾ, ಜಾತಿ ವ್ಯವಸ್ಥೆ ತೊಲಗಿಸುತ್ತೀರಾ, ಸಮಾನತೆ ತರುವಿರಾ? ನಿಮ್ಮ ಆದ್ಯತೆ ಯಾವುದು? ಎಂದು ಪ್ರಶ್ನಿಸಿದರು. ನೀವು ಕೇವಲ ಭ್ರಮೆಯಲ್ಲಿ ಆಡಳಿತ ಮಾಡುತ್ತಿದ್ದೀರ. ಶಾಂತಿ ಕದಡುವ ರೀತಿ ಆಡಳಿತ ನಡೆಸುತ್ತಿದ್ದೀರ ಎಂದು ವಾಗ್ದಾಳಿ ನಡೆಸಿದರು.
ಪ್ರಸ್ತುತ ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿದೆ. ದೇಶದ ಅಶಾಂತಿಯತ್ತ ತೆಗೆದುಕೊಂಡು ಹೋಗಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಮತ್ತೆ ಬರುವುದು ಅನಿವಾರ್ಯ ಹಾಗೂ ಶತಸಿದ್ಧ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯೇ ವರ್ಷದಿಂದ ವರ್ಷಕ್ಕೆ ಪ್ರತಿ ರಾಜ್ಯದಲ್ಲಿ ಆಡಳಿತ ಕಳೆದುಕೊಂಡು ಬಿಜೆಪಿ ಮುಕ್ತವಾಗುತ್ತಿದೆ. ಕಾಂಗ್ರೆಸ್ನವರು ನಿರಾಸೆಯಾಗಬೇಕಿಲ್ಲ. ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಮತ್ತೆ ಪುಟಿದೇಳಲಿದೆ. ಅದಕ್ಕೆ ಸಹನೆ ಬೇಕು.ಪಕ್ಷ ಕಟ್ಟುವ ಕೆಲಸ ಕಾಂಗ್ರೆಸ್ ಪ್ರಾರಂಭಿಸಿದೆ ಎಂದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದಾರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಶ್ರೀ ದಿನೇಶ್ ಗುಂಡುರಾವ್, ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಈಶ್ವರ್ ಖಂಡ್ರೆ, ಎಐಸಿಸಿ ಸದಸ್ಯ ವಿಷ್ಣುನಾಥನ್, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.