ಪೌರತ್ವ ಕಾಯ್ದೆಯಿಂದ ಮುಸ್ಲಿಂ ಧರ್ಮ ಮಾತ್ರ ಏಕೆ ಕೈಬಿಟ್ಟಿರಿ ? ಕೇಂದ್ರಕ್ಕೆ ಬಿಜೆಪಿ ನಾಯಕ ಬೋಸ್ ಪ್ರಶ್ನೆ
ಕೋಲ್ಕತ್ತಾ : (ಡಿ.24) ಒಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಪೌರತ್ವ ಮಸೂದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನೊಂದೆಡೆ ತಮ್ಮ ಸರ್ಕಾರ ಜಾರಿಗೆ ಮಾಡಲೊರಟ ಪೌರತ್ವ ಮಸೂದೆ ಬೆಂಬಲಿಸಿ ಬಿಜೆಪಿ ನಾಯಕರು ಮೆರವಣಿಗೆಗಳನ್ನು ಆಯೋಜಿಸುತ್ತಿದ್ದಾರೆ. ಈ ಮಧ್ಯೆ ಅದೇ ಬಿಜೆಪಿಯ ಪ್ರಮುಖ ನಾಯಕರಾದ ಚಂದ್ರ ಕುಮಾರ್ ಬೋಸ್ ಪೌರತ್ವ ಮಸೂದೆ ಕಾಯ್ದೆ ವಿರುದ್ಧ ಧ್ವನಿಯೆತ್ತಿದ್ದಾರೆ.
ಹೌದು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೋದರ ಮೊಮ್ಮಗನಾದ ಚಂದ್ರ ಕುಮಾರ್ ಬೋಸ್ ಕೇಂದ್ರ ಸರ್ಕಾರದ ನಿರ್ಧಾರವನ್ನು ಟ್ವೀಟ್ ಮೂಲಕ ಪ್ರಶ್ನಿಸಿದ್ಧಾರೆ. ಭಾರತವೊಂದು ಸರ್ವಧರ್ಮಗಳ ರಾಷ್ಟ್ರ. ಎಲ್ಲಾ ಧರ್ಮ ಮತ್ತು ಸಮುದಾಯಗಳು ಇಲ್ಲಿ ಬದುಕಲು ಅವಕಾಶ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಒಂದು ವೇಳೆ ಪೌರತ್ವ ಮಸೂದೆ ಕಾಯ್ದೆ ಧರ್ಮಾಧಾರಿತ ಇಲ್ಲವೆಂದಾದರೆ, ನಾವ್ಯಾಕೇ ಹಿಂದೂ, ಸಿಖ್, ಬುದ್ಧ, ಕ್ರಿಶ್ಚಿಯನ್, ಪಾರ್ಸಿ ಮತ್ತು ಜೈನರ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಈ ಕಾಯ್ದೆಯಿಂದ ಮುಸ್ಲಿಮ್ ಸಮುದಾಯವನ್ನು ಏಕೆ ಕೈಬಿಟ್ಟಿದ್ದೇವೆ? ಎಂದು ಬೋಸ್ ಪ್ರಶ್ನಿಸಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ನಾವು ಪಾರದರ್ಶಕವಾಗಿರಬೇಕು ಎಂದು ಹೇಳಿದ್ದಾರೆ.
ಭಾರತವನ್ನು ಬೇರೆ ದೇಶದೊಂದಿಗೆ ಹೋಲಿಕೆ ಮಾಡಬಾರದು. ಇನ್ನೊಂದು ದೇಶಕ್ಕೆ ತುಲನೆ ಮಾಡಿ ಸಮಾನವಾದದ್ದು ಎಂದು ನಿರೂಪಿಸುವ ಕೆಲಸ ಮಾಡಬಾರದು. ಭಾರತವೊಂದು ಸರ್ವಧರ್ಮಗಳ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮ ಹಾಗೂ ಸಮುದಾಯಗಳಿಗೂ ಬದುಕುವ ಹಕ್ಕಿದೆ ಎಂದು ಬೋಸ್ ಟ್ವೀಟ್ ಮಾಡಿದ್ದಾರೆ.