40,000 ಕೋಟಿ ರೂ ಉಳಿಸಲು ಫಡ್ನವಿಸ್ ಸಿಎಂ ಆದರು ಅನಂತ್ ಕುಮಾರ್ ಹೆಗಡೆ : ಇಲ್ಲ ಸುಳ್ಳು ಎಂದ ಫಡ್ನವಿಸ್
ಮಹಾರಾಷ್ಟ್ರ : (ಡಿ.02) ಬುಲೆಟ್ ಟ್ರೈನ್ ಯೋಜನೆಗಾಗಿನ 40,000 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ಮಾಡಲು ದೇವೇಂದ್ರ ಫಡ್ನವೀಸ್ 80 ಗಂಟೆಗಳ ಕಾಲ ಮಹಾರಾಷ್ಟ್ರ ಸಿಎಂ ಆಗಿ ನಾಟಕ ಆಡಿದರು ಎಂದು ಉತ್ತರ ಕನ್ನಡ ಸಂಸದ ಅನಂತ್ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಉತ್ತರ ಕನ್ನಡ ಕ್ಷೇತ್ರದ ಸಂಸತ್ ಸದಸ್ಯ ಹೆಗಡೆ ವಿವಾದಾತ್ಮಕ ಟೀಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಬಹುಮತವಿಲ್ಲದೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವನ್ನು ಏಕೆ ರಚಿಸಿತು ಎಂದು ಎಲ್ಲರೂ ಕೇಳುತ್ತಿದ್ದಾರೆ, ಅದಕ್ಕೆ ಉತ್ತರ ಇಲ್ಲಿದೆ ಎಂದು ಅವರು ಹೇಳಿದ್ದಾರೆ.
ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ತಮ್ಮ ಪಕ್ಷದ ಸಂಸದ ಹೆಗಡೆಯವರ ಮಾತು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ನಾನು ಸಿಎಂ ಆಗಿ ಅಂತಹ ಯಾವುದೇ ಪ್ರಮುಖ ನೀತಿ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಂತಹ ಎಲ್ಲಾ ಆರೋಪಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ದೇವೇಂದ್ರ ಫಡ್ನವಿಸ್ ಬುಲೆಟ್ ಟ್ರೈನ್ ವಿಚಾರದಲ್ಲಿ ಮಹರಾಷ್ಟ್ರ ಸರ್ಕಾರ ಭೂಮಿ ವಶಪಡಿಸಿಕೊಡಬೇಕಿರುವ ಕೆಲಸ ಮಾತ್ರ ಮಾಡುತ್ತಿದೆ. ಉಳಿದ ಹಣದ ವಿಚಾರವೆಲ್ಲಾ ಕೇಂದ್ರ ಸರ್ಕಾರ ಮತ್ತು ಕಂಪನಿಯ ನಡುವೆ ನಡೆಯುತ್ತದೆಯೇ ಹೊರತು ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ಸಿಎಂಗೆ ಕೇಂದ್ರದಿಂದ ಸುಮಾರು 40,000 ಕೋಟಿ ರೂ ಬುಲೆಟ್ ಟ್ರೈನ್ ವಿಚಾರಕ್ಕೆ ಮಹಾರಾಷ್ಟ್ರ ಸರ್ಕಾರದ ಖಾತೆಗೆ ಬಂದಿತ್ತು. ಆದರೆ ಕಾಂಗ್ರೆಸ್, ಎನ್ಸಿಪಿ ಮತ್ತು ಶಿವಸೇನೆ ಸರ್ಕಾರ ಅಧಿಕಾರಕ್ಕೆ ಬಂದರೆ ಅದು ಅಭಿವೃದ್ಧಿಗೆ ಮೀಸಲಾದ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ದೇವೇಂದ್ರ ಫಡ್ನವಿಸ್ಗೆ ತಿಳಿದಿತ್ತು. ಆದ್ದರಿಂದ ಒಂದು ನಾಟಕ ಆಡಬೇಕು ಎಂದು ನಿರ್ಧರಿಸಲಾಯಿತು. ಫಡ್ನವೀಸ್ ಸಿಎಂ ಆದರು ಮತ್ತು 15 ಗಂಟೆಗಳಲ್ಲಿ ಅವರು 40,000 ಕೋಟಿ ರೂ.ಗಳನ್ನು ಮತ್ತೆ ಕೇಂದ್ರಕ್ಕೆ ವರ್ಗಾಯಿಸಿದರು ಎಂದು ಬೈಪಾಲ್-ಯೆಲ್ಲಾಪುರದಲ್ಲಿ ಪ್ರಚಾರದ ಸಭೆಯಲ್ಲಿ ಹೆಗಡೆ ಹೇಳಿದ್ದರು.