“ಸ್ನೇಹನಿಧಿ” ಜೋಸೆಫ್ ಕ್ರಾಸ್ತಾ ಅವರಿಗೆ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.
ಕಾಸರಗೋಡು : (ನ.26) ಸಾಂಸ್ಕೃತಿಕ ಸಂಘಟನೆಯಾಗಿರುವ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಹಾಗೂ ಪುಸ್ತಕ ಪ್ರಕಾಶನ ಸಂಸ್ಥೆಯಾಗಿರುವ ಸುಬ್ಬಯ್ಯಕಟ್ಟೆ ಕೈರಳಿ ಪ್ರಕಾಶನವು ಕೊಡಮಾಡುವ ಪ್ರತಿಷ್ಠಿತ ಗಡಿನಾಡು ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ನೇಹಾಲಯದ ರೂವಾರಿ ಜೋಸೆಫ್ ಕ್ರಾಸ್ತಾ ಅವರಿಗೆ ಪ್ರದಾನಗೈಯ್ಯಲಾಯಿತು. ಜೋಸೆಫ್ ಕ್ರಾಸ್ತಾ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಗಸಾಸಂ ಅಕಾಡೆಮಿ ಹಾಗೂ ಕೈರಳಿ ಪ್ರಕಾಶನದ ಜಂಟಿ ಆಶ್ರಯದಲ್ಲಿ ಕಾಸರಗೋಡಿನಲ್ಲಿ ಜರಗಿದ ವರ್ಣರಂಜಿತ ಗಡಿನಾಡ ರಾಜ್ಯೋತ್ಸವ ಸಮಾರಂಭದಲ್ಲಿ ಘನವೆತ್ತ ಕರ್ನಾಟಕ ಸರಕಾರದ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಅವರು ಪ್ರಶಸ್ತಿ ನೀಡಿದರು. ಪ್ರಶಸ್ತಿ ಫಲಕ, ಸನ್ಮಾನ ಪತ್ರ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ದ.ಕ. ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರಾ ವಹಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಕಲಾವಿದ ಸಂಕಬೈಲು ಸತೀಶ ಅಡಪ್ಪ, ಹರಿದಾಸ ಜಯಾನಂದ ಕುಮಾರ್, ಪ್ರಭಾಕರ ಕಲ್ಲೂರಾಯ, ಕೈರಳಿ ಪ್ರಕಾಶನದ ಎ. ಆರ್. ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಲೇಖಕ, ಪತ್ರಕರ್ತ ರವಿ ನಾಯ್ಕಾಪು ಅವರು ಜೋಸೆಫ್ ಕ್ರಾಸ್ತಾರ ಬಗ್ಗೆ ಪರಿಚಯ ನೀಡಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.