ಮಂಗಳೂರು ಗ್ರಾಮಾಂತರ ಆಟೋಗಳಿಗೆ ಆರ್ಟಿಒ ದಂಡ ಹಾಕುವಂತಿಲ್ಲ ; ಹೈಕೋರ್ಟ್ ಆದೇಶ
ಬೆಂಗಳೂರು : (ನ.20) ಮಂಗಳೂರು ಗ್ರಾಮಾಂತರ ಆಟೋ ಚಾಲಕರಿಗೆ ಆರ್ಟಿಒ ದಂಡ ಹಾಕುತ್ತಿರುವ ವಿಚಾರವಾಗಿ ಇಂದು ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ಬಳಿಕ ಮಂಗಳೂರು ಗ್ರಾಮಾಂತರ ಆಟೋ ಚಾಲಕರಿಗೆ ಆರ್ಟಿಒ ದಂಡ ಹಾಕುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಮಂಗಳೂರು ಗ್ರಾಮಾಂತರ ಆಟೋ ಚಾಲಕರು ನಗರ ವ್ಯಾಪ್ತಿಗೆ ಬಂದರೆ ಆರ್ಟಿಒ ದಂಡ ವಿಧಿಸುತ್ತಿತ್ತು. ಹೀಗಾಗಿ ಆರ್ಟಿಒ ವಿರುದ್ದ ನೂರಾರು ಮಂಗಳೂರು ಗ್ರಾಮಾಂತರ ಆಟೋ ಚಾಲಕರು ಮಂಗಳೂರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಆಟೋ ಚಾಲಕರಿಗೆ ದಂಡ ಹಾಕದಂತೆ ಮಂಗಳೂರು ಡಿಸಿ ಆರ್ಟಿಒಗೆ ಸೂಚಿಸಿದ್ದರು. ಗ್ರಾಮಾಂತರ ಆಟೋ ಚಾಲಕರು ನಗರ ವ್ಯಾಪ್ತಿಗೆ ಬಂದಲ್ಲಿ ದಂಡ ಹಾಕಬಾರದು ಎಂದು ಡಿಸಿ ಆದೇಶಿಸಿದ್ದರು.
ಆದರೂ ಸಹ ಡಿಸಿ ಆದೇಶವನ್ನು ಪಾಲಿಸದ ಆರ್ಟಿಒ ಅಧಿಕಾರಿಗಳು ಆಟೋ ಚಾಲಕರಿಗೆ ದಂಡ ವಿಧಿಸುವ ಕ್ರಮವನ್ನು ಮುಂದುವರೆಸಿದ್ದರು. ಇದನ್ನು ಪ್ರಶ್ನಿಸಿ 50 ಆಟೋ ಯೂನಿಯನ್ ನಾಯಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮಂಗಳೂರು ಡಿಸಿ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಬೇಕು. ಮುಂದೆ ದಂಡ ವಸೂಲಿ ಮಾಡದಂತೆ ನಿರ್ದೇಶಿಸಲು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಜನವರಿ 16, 2019ರಂದು ಆಟೋ ಚಾಲಕರಾದ ವೆಂಕಟೇಶ್ ಶೆಟ್ಟಿ ಮತ್ತು ಇತರರು ಸೇರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ಪ್ರಕರಣದ ವಿಚಾರವಾಗಿ ಹೈಕೋರ್ಟ್ ವಾದ-ಪ್ರತಿವಾದ ಆಲಿಸಿ ಬಳಿಕ ಆದೇಶ ನೀಡಿತು.
ಹೈಕೋರ್ಟ್ ಆದೇಶ :
ಮಂಗಳೂರು ಡಿಸಿ ನೀಡಿದ್ದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಡಿಸಿ ಆದೇಶವನ್ನು ಆರ್ಟಿಒ ಅಧಿಕಾರಿಗಳು ಗಾಳಿಗೆ ತೂರುವಂತಿಲ್ಲ. ಇನ್ಮುಂದೆ ಗ್ರಾಮಾಂತರ ಆಟೋಗಳು ನಗರದಲ್ಲಿ ಸಂಚರಿಸಬಹುದು. ಯಾವುದೇ ಆಟೋಗಳ ಮೇಲೆ ಆರ್.ಟಿ.ಓ ದಂಡ ಹೇರುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.