ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ಇದರ ಪದಗ್ರಹಣ ವಾರ್ಷಿಕ ಸಮಾರಂಭ
ಮಂಗಳೂರು : (ನ.17) ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ.) ಇದರ ಮೂರನೇ ವರ್ಷದ ವಾರ್ಷಿಕ ಸಮಾರಂಭ ಹಾಗೂ ಪದಗ್ರಹಣ ಕಾರ್ಯಕ್ರಮವು ದಿನಾಂಕ 17/11/2019ರಂದು ಪೆರ್ಲಾಪು ಪ್ರಾಥಮಿಕ ಹಿರಿಯ ಶಾಲೆಯ ಸಭಾಂಗಣದಲ್ಲಿ ಬೆಳಗ್ಗೆ 8 ಗಂಟೆಗೆ ಶ್ರೀ ಅರುಣ್ ಶಾಂತಿಯವರ ನೇತೃತ್ವದ ತಂಡದಿಂದ ಗುರುಪೂಜೆಯೊಂದಿಗೆ ಆರಂಭಗೊಂಡಿತು. ಶ್ರೀ. ಉಮ್ಮಪ್ಪ ಪೂಜಾರಿ ಪಿ. ಅಸೋಸಿಯೇಟ್ ಪ್ರೊಫೆಸರ್ ಗೋಕರ್ಣನಾಥೇಶ್ವರ ಪದವಿ ಕಾಲೇಜು ಮಂಗಳೂರು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ (ರಿ.) ಇದರ ಸ್ಥಾಪಕಾಧ್ಯಕ್ಷರಾದ ಶ್ರೀ ಉದಯ ಪೂಜಾರಿ, ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯಷನ್ (ರಿ.) ಇದರ ಅಧ್ಯಕ್ಷರಾದ ಶ್ರೀ ಬೇಬಿ ಕುಂದರ್, ಮಂತ್ರದೇವತಾ ಸಾನಿಧ್ಯ ಕಟ್ಟೆಮಾರ್ ಇಲ್ಲಿಯ ಶ್ರೀ ಮನೋಜ್ ಕುಮಾರ್ ಕಟ್ಟೆಮಾರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಮ್ಮ ಗ್ರಾಮದ ನಮ್ಮ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ನಾಲ್ಕು ಜನ ಸಾಧಕರನ್ನು ಹಾಗೂ ನಾಟಕರಂಗ, ಚಲನಚಿತ್ರ ನಟ, ಶ್ರೀಯುತ ಸತೀಶ್ ಬಂದಲೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಶ್ರೀ. ಸತ್ಯಜಿತ್ ಸುರತ್ಕಲ್ ಅವರು ಬಿಲ್ಲವ ಯುವ ಸಮುದಾಯ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವ ಮಾರ್ಗದರ್ಶಿ ಮಾತುಗಳನ್ನಾಡಿದರು. ಟ್ರಸ್ಟ್ ನ ನಿಕಟಪೂರ್ವ ಅಧ್ಯಕ್ಷ ವಿದ್ಯಾಧರ್ ಪೂಜಾರಿ ಪೆರ್ಲಾಪು ಸ್ವಾಗತಿಸಿದರು, ಟ್ರಸ್ಟ್ ನ ನಿಕಟಪೂರ್ವ ಸಂಚಾಲಕರಾದ ಸಂಪತ್ ಕೋಟ್ಯಾನ್ ಕಡೇಶಿವಾಲಯ ಇವರು ಟ್ರಸ್ಟ್ ನಡೆದು ಬಂದ ಹಾದಿಯನ್ನು ತಿಳಿಸಿ ಪ್ರಸ್ತಾವನೆಗೈದರು, ಹಾಗೂ ಲೋಕನಾಥ್ ಪೂಜಾರಿ ತಿಮರಾಜೆ ಧನ್ಯವಾದ ಭಾಷಣವನ್ನು ಮಾಡಿದರು. ಶ್ರೀ ಲಕ್ಷ್ಮೀಶ್ ಸುವರ್ಣರ ಮಂಗಳೂರು ಇವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಯುವವಾಹಿನಿ ಸಂಘಟನೆಯ ಅನ್ಯಾನ್ಯ ಘಟಕದ ಪದಾಧಿಕಾರಿಗಳು, ಬಿರುವೆರ್ ಕುಡ್ಲ ಸಂಘಟನೆಯ ವಿವಿಧ ಘಟಕದ ಪದಾಧಿಕಾರಿಗಳು, ಗರಡಿಗಳ ಪ್ರಮುಖರು, ಸಮುದಾಯದ ಮುಖಂಡರು ಹಾಗೂ ಗ್ರಾಮದ ಸುಮಾರು 1000 ಬಿಲ್ಲವ ಬಂಧುಗಳು ಉಪಸ್ಥಿತರಿದ್ದರು.