ದ.ಕ ಜಿಲ್ಲಾ ಶಿಕ್ಷಣಾಧಿಕಾರಿ ವೈ. ಶಿವರಾಮಯ್ಯ ರಿಗೆ ಬಿಳ್ಕೋಡುಗೆ
ಮಂಗಳೂರು: (ಅ.21) ದಕ್ಷಿಣಕನ್ನಡ ಜಿಲ್ಲಾ ಶಿಕ್ಷಣಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ವರ್ಗಾವಣೆಗೊಂಡ ವೈ. ಶಿವರಾಮಯ್ಯ ರವರಿಗೆ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ಮತ್ತು ಸದಸ್ಯರಿಂದ ವಿಶೇಷವಾಗಿ ಸನ್ಮಾನಿಸಿ ಬಿಳ್ಕೋಡಲಾಯಿತು.
ಸನ್ಮಾನ ನೆರವೇರಿಸಿ ಮಾತನಾಡಿದ ಶ್ರೀಮತಿ ಅನಿತ ಹೇಮನಾಥ್ ಶೆಟ್ಟಿ ಶಿವರಾಮಯ್ಯರು ಪುತ್ತೂರು ಶಿಕ್ಷಣಾಧಿಕಾರಿಗಳಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ್ದರು, ದೈವ ಭಕ್ತರಾಗಿರುವ ಇವರು ಪುತ್ತೂರು ಮಹಾಲಿಂಗೇಶ್ವರ ದೇವರ ಪರಮ ಭಕ್ತ ಕೂಡಾ ಹೌದು. ಪ್ರತಿದಿನ ಶ್ರೀ ದೇವರ ದರ್ಶನ ಮಾಡುವುದಲ್ಲದೆ ಜಾತ್ರೆಯ ದಿನಗಳಲ್ಲಿ ಪ್ರತಿದಿನ ದೇವರ ಸವಾರಿಯ ಸಂದರ್ಭದಲ್ಲಿ ದೇವರೊಂದಿಗೆ ತೆರಳುತ್ತಿದ್ದರು ಎಂದ ಅವರು ಇವರ ಭಕ್ತಿಗೆ ಪೂರಕವಾಗಿ ಪುತ್ತೂರು ಮಹಾಲಿಂಗೇಶ್ವರ ದೇವರ ದೇವಸ್ಥಾನದ ಕಾರ್ಯನಿರ್ವಣಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಾಗಿದ್ದರು. ಜಿಲ್ಲಾ ಶಿಕ್ಷಣ ಅಧಿಕಾರಿಗಳಾಗಿ ಅನೇಕ ಅಭಿವೃದ್ದಿ ಕಾರ್ಯಗಳಿಗೆ ಮುನ್ನುಡಿ ಬರೆದದ್ದಲ್ಲದೆ ಇಲಾಖೆಯಲ್ಲಿ ಶಿಸ್ತು ಸೇರಿದಂತೆ ಹಲವು ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ಇವರು ನಮ್ಮಲ್ಲಿಂದ ತೆರಳುತ್ತಿರುವುದು ಅವರಿಗೆ ಅನಿವಾರ್ಯವಾದರೂ ನಮಗೆ ಸ್ವಲ್ಪ ಮಟ್ಟಿನ ನಷ್ಟವಾಗುತ್ತಿದೆ ಎನ್ನುವುದೂ ಸತ್ಯ. ಏನೇ ಆಗಲಿ ಸರಕಾರಿ ಅಧಿಕಾರಿಗಳ ವರ್ಗಾವಣೆ ಸಹಜ ಮತ್ತು ನಾವು ಅದನ್ನು ಒಪ್ಪಿಕೊಳ್ಳಲೇ ಬೇಕು. ಅವರ ಮುಂದಿನ ಕೆಲಸಗಳು ಸುಗಮವಾಗಿ ಸಾಗಲಿ , ಅವರ ಸೇವೆ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿ. ಅವರ ವೈಯಕ್ತಿಕ ಜೀವನವೂ ಸುಖ ಶಾಂತಿ ನೆಮ್ಮದಿ ಆರೋಗ್ಯದಿಂದ ಕೂಡಲಿ ಎಂಬ ಹಾರೈಕೆ ನಮ್ಮದು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಸುಚರಿತ ಶೆಟ್ಟಿ, ಎಂ. ಎಸ್. ಮೊಹಮ್ಮದ್, ಮಂಜುಳಾ ಮಾಧವ ಮಾವೆ, ಪ್ರಮಿಳಾ ಜನಾರ್ಧನ್, ಕೊರಗಪ್ಪ ನಾಯ್ಕ್, ರಶಿದಾ ಬಾನು ಉಪಸ್ಥಿತರಿದ್ದರು.
ವರದಿ: ರವಿಪ್ರಸಾದ್ ಶೆಟ್ಟಿ