ಜಯನಗರದಲ್ಲಿ “ಅಕ್ಕಮಹಾದೇವಿ ಉದ್ಯಾನವನ” ಉದ್ಘಾಟನೆ ಮತ್ತು ಪುತ್ಥಳಿ ಅನಾವರಣಗೊಳಿಸಿದ ಶಾಸಕಿ ಸೌಮ್ಯ ರೆಡ್ಡಿ
ಬೆಂಗಳೂರು : (ಅ.17) ಜಯನಗರ ವಿಧಾನಸಭಾ ಕ್ಷೇತ್ರದ ಪಟ್ಟಾಭಿರಾಮನಗರ ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು 2.36 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ “ಅಕ್ಕಮಹಾದೇವಿ ಉದ್ಯಾನವನ” ಉದ್ಘಾಟನೆ ಮತ್ತು ಪುತ್ಥಳಿ ಅನಾವರಣವನ್ನು ಶಾಸಕಿ ಸೌಮ್ಯ ರೆಡ್ಡಿ ಇಂದು ಮಾಡಿದರು. ಹಾಗೂ ಶಿವಶರಣೆ ಅಕ್ಕಮಹಾದೇವಿ ರವರ “ಅಕ್ಕನ ವಚನಗಳು” ಪುಸ್ತಕವನ್ನು 100ಕ್ಕೂ ಹೆಚ್ಚು ಸಾರ್ವಜನಿಕರಿಗೆ ಶಾಸಕಿ ಸೌಮ್ಯ ರೆಡ್ಡಿ ವೈಯಕ್ತಿಯವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮಿ, ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ, ಸುತ್ತುರು ಕ್ಷೇತ್ರ ಮತ್ತು ಮಾಜಿ ಗೃಹ ಸಚಿವರು, ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾರೆಡ್ಡಿ ರವರು ಕಾರಣಾಂತರಗಳಿಂದ ಈ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಆದರಲ್ಲೂ 4 ಬಾರಿ ಜಯನಗರ ಶಾಸಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ರಾಮಲಿಂಗಾರೆಡ್ಡಿ ರವರು ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಉದ್ಯಾನವನಗಳನ್ನು ಪ್ರಾರಂಭಿಸಲು ಸಾಕಷ್ಟು ಶ್ರಮಿಸಿದ್ದಾರೆ ಮತ್ತು ಇಲ್ಲಿನ 12 ಉದ್ಯಾನವನಗಳ ಅಭಿವೃದ್ಧಿಗೆ ನನ್ನ ಮತ್ತು ಶ್ರೀರಾಮಲಿಂಗಾರೆಡ್ಡಿ ಅವರ ಕೋರಿಕೆಯ ಮೇರೆಗೆ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ್ ರವರು ಮಹಾಪೌರರಾಗಿದ್ದ ವೇಳೆ ಸುಮಾರು 16 ಕೋಟಿ ರೂ ಗಳ ಅನುದಾನವನ್ನು ನೀಡಿದ್ದರು. ಅವರ ಈ ಕಾರ್ಯಕ್ಕೆ ನನ್ನ ಧನ್ಯವಾದಗಳು ಎಂದು ತಿಳಿಸಿದರು.
ಕನ್ನಡದ ಪ್ರಮುಖ ವಚನಗಾರ್ತಿಯಾದ ಅಕ್ಕಮಹಾದೇವಿ “ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದಡೆ ಎಂತಯ್ಯ ” ವಚನದಲ್ಲಿ ತಿಳಿಸಿರುವಂತೆ ಈ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. ಶಿವಶರಣೆ ಅಕ್ಕಮಹಾದೇವಿ ರವರು ಕೇವಲ ಒಂದು ಪುತ್ಥಳಿಯಾಗಿ ಈ ಉದ್ಯಾನವನದಲ್ಲಿ ಉಳಿಯಬಾರದು ಬದಲಾಗಿ, ಅವರ ಬರಹ ಮತ್ತು ಜೀವನ ಚರಿತ್ರೆ ದೇಶದ ಎಲ್ಲರಿಗೂ ತಲುಪಿಸುವ ಕೆಲಸವಾಗಬೇಕು ಮತ್ತು ನಾವೂ ಸಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ ಮತ್ತು ಧರ್ಮವನ್ನು ಮೀರಿದ ಸಂದೇಶಗಳನ್ನು ಹೊಂದಿದ್ದ ಅಕ್ಕ ಮಹಾದೇವಿ ಮತ್ತು ಬಸವಣ್ಣ ನವರ ತತ್ವ ಮತ್ತು ಸಿದ್ಧಾಂತಗಳನ್ನು ನಾವೂ ಇಂದು ಪಾಲನೆ ಮಾಡಿಲ್ಲವೆಂದರೆ ಯಾವುದೇ ಪ್ರಯೋಜನವಿಲ್ಲ. ನಮ್ಮ ಮುಂದಿನ ತಲೆಮಾರಿಗೆ ಇವರ ವಚನಗಳ ಮೌಲ್ಯಗಳನ್ನು ತಿಳಿಸಬೇಕಿದೆ.
ಮಹಿಳಾ ಸಬಲೀಕರಣದ ಅಗತ್ಯ ಇಂದು ಅವಶ್ಯಕವಾಗಿದ್ದು ಬಿಬಿಎಂಪಿಯಲ್ಲಿ ಸದ್ಯಕ್ಕೆ ಶೇಕಡ 50% ಮಹಿಳೆಯರಿರುವುದು ಖುಷಿಯ ವಿಚಾರ, 33% ಮಹಿಳಾ ಮೀಸಲಾತಿಯನ್ನು ನಾವು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಇದನ್ನು ಅನುಷ್ಠಾನಗೊಳಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಉದ್ಯಾನವನಗಳನ್ನು ಮತ್ತು ವಿಶಾಲವಾದ ಪರಿಸರವನ್ನು ಸಂರಕ್ಷಿಸುವುದು, ಸುಧಾರಿಸುವುದು, ರಕ್ಷಿಸುವುದು ಮತ್ತು ಉತ್ತೇಜಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ನಮ್ಮ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಒಂದು ಮಾರ್ಗವೆಂದರೆ ನಮ್ಮ ನೆರೆಹೊರೆಯಲ್ಲಿ ಆದಷ್ಟು ಮರ ಗಿಡಗಳನ್ನು ಬೆಳೆಸಲು ಮಹತ್ವ ನೀಡುವುದು ಎಂದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಹಾಪೌರರಾದ ಶ್ರೀ ಗೌತಮ್ ಕುಮಾರ್, ಸಂಸದರಾದ ಶ್ರೀ ತೇಜಸ್ವಿ ಸೂರ್ಯ, ಮಾಜಿ ಮಹಾ ಪೌರರಾದ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ್, ಪಾಲಿಕೆ ಸದಸ್ಯರಾದ ಶ್ರೀಮತಿ ನಾಗರತ್ನ ರಾಮಮೂರ್ತಿ, ಶ್ರೀ ನಾಗರಾಜ್, ಶ್ರೀಮತಿ ಮಾಲತಿ ಸೋಮಶೇಖರ್, ಶ್ರೀ ಗೋವಿಂದ ನಾಯ್ಡು, ಶ್ರೀ ಎಸ್.ಕೆ ನಟರಾಜ್, ಶ್ರೀ ಮಲ್ಲಿಕಾರ್ಜುನ್, ಕನ್ನಡ ಸಾಹಿತ್ಯ ಪರಿಷತ್ ಶ್ರೀ ನಾಗರಾಜ್, ಶ್ರೀ ಶರಣ ಸಾಹಿತ್ಯ ಪರಿಷತ್’ನ ಶ್ರೀ ಪಾಟೀಲ್, ಶ್ರೀ ಉಮೇಶ್, EE ಶ್ರೀ ಮಂಜುನಾಥ ರೆಡ್ಡಿ, AE ಶ್ರೀ ರಾಜೇಶ್, ತೋಟಗಾರಿಕೆ ಇಲಾಖೆ ಅಧೀಕ್ಷಕರಾದ ಶ್ರೀ ನಿರಂಜನ್ ಹಾಗೂ ಇತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಕೆ.ಪಿ ಪಾಟೀಲ್, ಶ್ರೀ ಉಮೇಶ್, ಶ್ರೀ ಬಾಬು ಗೌಡ ಪಾಟೀಲ್, ಶ್ರೀ ನಾಗರಾಜ್ ಎಂ.ಟಿ.ವಿ, ಶ್ರೀ ಕೇಶವ್ ಕುಮಾರ್, ಶ್ರೀ ಹರೀಶ್ ಆರಾಧ್ಯ ರವರಿಗೆ ಸನ್ಮಾನ ಮಾಡಲಾಯಿತು.