ಕೊರೋನಾ ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಅಧಿಕಾರಿಗಳಿಗೆ ಪ್ರಿಯಾಂಕ ಖರ್ಗೆ ಸೂಚನೆ.
ಚಿತ್ತಾಪುರ : (ಅ.01) ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಚಿತ್ತಾಪುರ ತಾಲೂಕಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೋಂಕು ಹಬ್ಬದಂತೆ ತಡೆಯಬೇಕು. ಚಿತ್ತಾಪುರ, ಕಾಳಗಿ ಹಾಗೂ ಶಹಾಬಾದ್ ತಹಸೀಲ್ದಾರ್ ಅವರು ಒಟ್ಟಾಗಿ ಕುಳಿತು ಮಾತನಾಡಿ ಚಿತ್ತಾಪುರ ತಾಲೂಕಿನಲ್ಲಿ ಕೊರೋನಾ ಸೋಂಕು ಹರಡದಂತೆ ತಡೆಯಲು ಕ್ರಮಕೈಗೊಳ್ಳಬೇಕು. ಶಾಸಕನಾಗಿ ನಾನು ಎಲ್ಲ ರೀತಿಯ ಸಹಕಾರ ನೀಡಲು ಸಿದ್ದನಿದ್ದೇನೆ ಎಂದು ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಚಿತ್ತಾಪುರ ಪಟ್ಟಣದ ನಾಗಾವಿ ಕ್ಯಾಂಪಸ್ ನಲ್ಲಿ ಈಗಾಗಲೇ 100 ಬೆಡ್ಗಳ ಕೊವೀಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಇದೇ ರೀತಿ 50 ಬೆಡ್ಗಳ ಮತ್ತೊಂದು ಕೇರ್ ಸೆಂಟರನ್ನು ವಾಡಿ ಪಟ್ಟಣದಲ್ಲಿ ತೆರೆಯಲು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ತಾಲೂಕಿನಲ್ಲಿ ಒಟ್ಟು 4510 ಮಾದರಿಗಳನ್ನು ಸಂಗ್ರಹಿಸಿಲಾಗಿದ್ದು ಅವುಗಳಲ್ಲಿ 4080 RT PCR ಹಾಗೂ ಉಳಿದ 430 Rapid ನಲ್ಲಿ ಪರೀಕ್ಷೆ ಮಾಡಲಾಗಿದೆ. ಇದುವರೆಗೆ ಒಟ್ಟು 552 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 398 ಜನ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 152 ಜನ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಸಾವನ್ನಪ್ಪಿರುವ ಬಗ್ಗೆ ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೋಂಕಿತರನ್ನು ಪತ್ತೆ ಹಚ್ಚಲು ಹಾಗೂ ಸೋಂಕು ಹಬ್ಬದಂತೆ ತಡೆಯಲು ಸಮುದಾಯ ಪರೀಕ್ಷೆ ನಡೆಸುವ ಅಗತ್ಯವೆನಿಸುತ್ತಿದೆ.
ಅದಕ್ಕಾಗಿ ಆರೋಗ್ಯ, ಕಂದಾಯ, ಪಂಚಾಯತ್, ಶಿಕ್ಷಣ ಹಾಗೂ ಇತ್ಯಾದಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಒಗ್ಗಟ್ಟಾಗಿ ಈ ಪ್ರಕ್ರಿಯೆಯಲ್ಲಿ ತೊಡಗಿದರೆ ನನ್ನ ಕಡೆಯಿಂದ ಬೇಕಾಗುವ ವೈದ್ಯಕೀಯ ಸಲಕರಣೆಗಳಾದ ಫಿವರ್ ಸ್ಕ್ರೀನಿಂಗ್ ಮೆಷೀನ್, ಬಿಪಿ- ಶುಗರ್ ಹಾಗೂ ಆಕ್ಸಿಜನ್ ತಪಾಸಣಾ ಯಂತ್ರ, ಸ್ಯಾನಿಟೈಜರ್ ಮತ್ತು ಫೇಸ್ ಶೀಲ್ಡ್ ಒದಗಿಸುವುದರ ಜೊತೆಗೆ ಅಗತ್ಯ ಸ್ವಯಂಸೇವಕರನ್ನೂ ಕೂಡಾ ನೇಮಿಸುವುದಾಗಿ ತಿಳಿಸಿದರು.
ಈ ನಿಟ್ಟಿನಲ್ಲಿ ಸಮಗ್ರ ಮಾಹಿತಿಯುಳ್ಳ ವರದಿಯನ್ನು ಇದೇ ತಿಂಗಳ 10 ರ ಒಳಗಾಗಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ಈ ಪ್ರಕ್ರಿಯೆಗೆ ಅಗತ್ಯ ಬಂದೋಬಸ್ತ್ ಕಲ್ಪಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷೆ ಸಮಯದಲ್ಲಿ ಸೋಂಕಿನ ಲಕ್ಷಣವಿಲ್ಲದವರಿಗೆ ಅಗತ್ಯ ಸಲಹೆ ಸೂಚನೆ ನೀಡಿ ಬಿಪಿ ಶುಗರ್ ಕಂಡು ಬಂದವರಿಗೆ ಸೂಕ್ತ ವೈದ್ಯಕೀಯ ನೆರವು ನೀಡುವುದರ ಜೊತೆಗೆ ಸೋಂಕಿನ ಲಕ್ಷಣ ಇರುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಬೇಕೆಂದು ನಿರ್ದೇಶಿಸಿದರು. ಭೀಮನಳ್ಳಿ, ಅಳ್ಳೊಳ್ಳಿ, ದಿಗ್ಗಾಂವ, ನಾಲವಾರ ಹಾಗೂ ಮಾಡಬೂಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನವಸತಿ ಮನೆಗಳು ಹಾಗೂ ವಿತರಿಸಲಾದ ಜಾಬ್ ಕಾರ್ಡ್ ಗಳ ಹೊಂದಾಣಿಕೆ ಕಂಡುಬರದ ಹಿನ್ನೆಲೆಯಲ್ಲಿ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ತಹಸೀಲ್ದಾರ ಅವರಿಗೆ ಆದೇಶಿಸಿದ್ದಾರೆ.