ಗಾಳಿ, ಮಳೆಗೆ ಹಾನಿಗೀಡಾದ ಸ್ಥಳಗಳನ್ನು ಪರಿಶೀಲನೆ ನಡೆಸಿದ ಶಾಸಕಿ ಸೌಮ್ಯ ರೆಡ್ಡಿ.
ಬೆಂಗಳೂರು : (ಮೇ.26) ಜಯನಗರ ಪೂರ್ವ ವಾರ್ಡ್’ನ 9ನೇ ಮುಖ್ಯ ರಸ್ತೆ ಮತ್ತು 1ನೇ ಬ್ಲಾಕ್ ಭೈರಸಂದ್ರ ಎಕ್ಸಟೆನ್ಶನ್’ನ 3ನೇ ಅಡ್ಡ ರಸ್ತೆ ಸೇರಿದಂತೆ ಕ್ಷೇತ್ರದ ಇನ್ನಿತರೇ ಪ್ರದೇಶಗಳಲ್ಲಿ ಭಾರಿ ಮಳೆಯ ಪರಿಣಾಮ ಧರೆಗುರುಳಿದ ಮರಗಳು ಮತ್ತು ವಿದ್ಯುತ್ ತಂತಿಗಳ ಮೇಲೆ ಬಿದ್ದಿದಂತಹ ಕೊಂಬೆಗಳನ್ನು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಚೆನ್ನಕೇಶವಮೂರ್ತಿ ಹಾಗೂ ಸಹಾಯಕ ಇಂಜಿನಿಯರ್ ಶ್ರೀ ಚಿರಂಜೀವಿ ಅವರ ಜೊತೆ ಇಂದು ಶಾಸಕಿ ಸೌಮ್ಯ ರೆಡ್ಡಿ ಪರಿಶೀಲನೆ ನಡೆಸಿ, ತೆರವುಗೊಳಿಸಲು ಸಹಕರಿಸಿದರು.
ಸ್ಥಳದಲ್ಲಿ ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ 24 ಗಂಟೆಗಳಿಗಿಂತ ಹೆಚ್ಚು ಕಾಲ ವಿದ್ಯುತ್ ಕಡಿತ ಮಾಡಿದ ಕಾರಣ ಪ್ರದೇಶದ ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಮತ್ತು ಇತರ ಅನೇಕರಿಗೆ ಸಾಕಷ್ಟು ತೊಂದರೆ ಉಂಟಾಗಿದ್ದು ಈ ಸಮಸ್ಯೆಗಳನ್ನು ಪರಿಹರಿಸಲು ಬೆಸ್ಕಾಂ ಅಧಿಕಾರಿಗಳು ಇನ್ನಷ್ಟು ಸಕ್ರಿಯವಾಗಿರಬೇಕು. ಹಲವಾರು ಸ್ಥಳಗಳಲ್ಲಿ 62 ಮರಗಳು, ವಿದ್ಯುತ್ ಕಂಬಗಳು ಮತ್ತು ತಂತಿಗಳು ಬಿದ್ದು ಹಾನಿಯುಂಟಾಗಿದ್ದು, ಬೆಂಗಳೂರಿನಲ್ಲಿ ಮರದ ಸಮೀಕ್ಷೆ ಮಾಡುವ ಬಗ್ಗೆ ನಾನು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಮುಂಚೆ ಮಾತನಾಡಿದ್ದೆ ಮತ್ತು ಒಣ ಕೊಂಬೆಗಳು, ಒಣ ಮರಗಳನ್ನು ನಿಯತಕಾಲಿಕವಾಗಿ ಪರಿಶೀಲನೆ ನಡೆಸಿ ತೆರವುಗೊಳಿಸುವುದರ ಬಗ್ಗೆ ಬಿ.ಬಿ.ಎಂ.ಪಿ ಕಮೀಷನರ್ ಮತ್ತು ಬಿ.ಬಿ.ಎಂ.ಪಿ ಮೇಯರ್ ಗಮನಹರಿಸಬೇಕು.
ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಲು ಬೆಸ್ಕಾಂ ಸೇರಿದಂತೆ ಇನ್ನಿತರೇ ಇಲಾಖೆ ಅಧಿಕಾರಿಗಳು ಸಿದ್ಧರಿರುತ್ತಾರೆ ಎಂದು ಭಾವಿಸಿದ್ದೇನೆ ಎಂದರು. ಬಿಬಿಎಂಪಿ, ಅರಣ್ಯ ಇಲಾಖೆ ಸಿಬ್ಬಂದಿ, ವಾಸು , ಕುಮಾರ್, ಭಾಂದವ ತಂಡ ಸ್ಥಳೀಯ ನಿವಾಸಿಗಳು ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.