ಸುರಕ್ಷಿತ ಸಾಮಗ್ರಿಗಳಿಲ್ಲದೆ ಕೆಲಸ ಮಾಡುವ ಪುತ್ತೂರು ಪೌರಕಾರ್ಮಿಕರು ಕಾರ್ಮಿಕ ಎಂಬ ಅಸಡ್ಡೆಯೇ ಅಧಿಕಾರದ ದರ್ಪವೇ ?
ಪುತ್ತೂರು : (ಮಾ.28) ನಗರಸಭೆ, ಪುರಸಭೆಗಳಲ್ಲಿ ಕಸ ವಿಲೇವಾರಿ, ತ್ಯಾಜ್ಯನಿರ್ವಹಣೆ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಯಾವುದೇ ಸೋಂಕು ತಗಲದಂತೆ ಮುಂಜಾಗ್ರತಾ ಕ್ರಮವಾಗಿ ಅವರಿಗೆ ಮಾಸ್ಕ್, ಕೈ ಚೀಲ ಹಾಗೂ ಡಕ್ ಬ್ಯಾಕ್ ಶೂಗಳನ್ನು ಕಡ್ಡಾಯವಾಗಿ ನೀಡಬೇಕೆಂದಿದೆ. ಆದರೆ ಪುತ್ತೂರು ನಗರಸಭೆಯಲ್ಲಿ ಕಾರ್ಮಿಕರ ಆರೋಗ್ಯದ ಮುಂಜಾಗ್ರತೆಗಾಗಿ ಅಗತ್ಯ ಸವಲತ್ತುಗಳನ್ನು ನೀಡದೆ ವಂಚಿಸಲಾಗುತ್ತಿದೆಯೇ ಎಂಬ ಅತಂಕ ಶುರುವಾಗಿದೆ.

ಶನಿವಾರ ದರ್ಬೆ ವೃತ್ತದ ಸಮೀಪ ಕಂಡ ದೃಶ್ಯ
ಪ್ರತೀ ವರ್ಷವು ಪೌರಕಾರ್ಮಿಕರಿಗೆ ಈ ಎಲ್ಲಾ ಸವಲತ್ತುಗಳನ್ನು ನೀಡುವ ಸಲುವಾಗಿ ವಾರ್ಷಿಕ ಟೆಂಡರ್ ಕರೆದು, ಖರೀದಿಯ ಬಿಲ್ಲು ಮಾಡಿ ಹಣ ದುರುಪಯೋಗ ಪಡಿಸುತ್ತಿರುವ ಬಗ್ಗೆ ನಗರ ವ್ಯಾಪ್ತಿಯ ನಿವಾಸಿಗಳಲ್ಲಿ ಅನುಮಾನ ದಟ್ಟವಾಗಿದೆ. ನಗರಸಭೆಯ ಪೌರಾಯುಕ್ತರು ಹಾಗೂ ಆರೋಗ್ಯ ನಿರೀಕ್ಷಕರು ಕೊರೋನದಂತಹ ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಿತ ವಸ್ತುಗಳಾದ ಮಾಸ್ಕ್, ಕೈ ಚೀಲ, ಶೂಸ್ ಗಳನ್ನು ನೀಡದೆ ಕಾರ್ಮಿಕರಿಂದ ಬರಿ ಕೈಯಲ್ಲೇ ಕೆಲಸ ನಿರ್ವಹಿಸುತ್ತಿರುವುದು ಬಹುದೊಡ್ಡ ಅಪರಾಧವಾಗುತ್ತದೆ. ಅಗತ್ಯವಾದ ಆರೋಗ್ಯ ಮುಂಜಾಗ್ರತಾ ವಸ್ತುಗಳಿಲ್ಲದೆ ನಗರಸಭೆಯ ಪೌರಕಾರ್ಮಿಕರು ತಮ್ಮ ಹೊಟ್ಟೆಪಾಡಿಗಾಗಿ ಜೀವದ ಹಂಗು ತೊರೆದು ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ನಿರ್ವಹಿಸುವಂತಾಗಿರುತ್ತದೆ.

ಫೈಲ್ ಚಿತ್ರ
ಕೇವಲ ರೂ.12000 ಕನಿಷ್ಟ ವೇತನದ ಅಡಿಯಲ್ಲಿ ದುಡಿಯುತ್ತಿರುವ ಇಂತಹ ಪೌರಕಾರ್ಮಿಕರ ಕಷ್ಟ ಸಾವಿರಾರು ರೂಪಾಯಿ ಸಂಬಳ ಪಡೆಯುವ ಹಾಗೂ ಹವಾನಿಯಂತ್ರಿತ ಕಾರಿನಲ್ಲಿ ಓಡಾಡುವ ಅಧಿಕಾರಿಗಳಿಗೆ ಹೇಗೆ ಗೊತ್ತಾಗುತ್ತದೆ? ಸರಕಾರದ ನಿಯಮದಂತೆ ಪೌರಕಾರ್ಮಿಕರಿಗೆ ಕನಿಷ್ಟ ಮುಂಜಾಗ್ರತಾ ಸವಲತ್ತುಗಳು ಒದಗಿಸದೆ ವಂಚಿಸಿರುವ ಅಧಿಕಾರಿ ವಿರುದ್ದ ಮೇಲಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಸಾರ್ವಜನಿಕರ ಆಶಯವಾಗಿದೆ.