ಪಡಿತರ ಕಾರ್ಡಿಗೆ 2 ಕೆಜಿ ಅಕ್ಕಿ ಇಳಿಸಲು ಚಿಂತನೆ, ಆಹಾರ ಇಲಾಖೆಯಿಂದ ಸರಕಾರಕ್ಕೆ ಶಿಫಾರಸು
ಬೆಂಗಳೂರು : (ಜ.17) ಬಿಪಿಎಲ್ ಕುಟುಂಬದ ಸದಸ್ಯರಿಗೆ 7 ಕೆಜಿ ಬದಲು 5 ಕೆಜಿ ಅಕ್ಕಿ ನೀಡುವಂತೆ ಆಹಾರ ಇಲಾಖೆ ಸರಕಾರಕ್ಕೆ ಶಿಫಾರಸು ಮಾಡಿದೆ. ಆದರೆ, ಸರಕಾರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಪ್ರತಿ ಕುಟುಂಬ ಸದಸ್ಯರಿಗೆ 5 ಕೆಜಿ ಅಕ್ಕಿ ಕೊಟ್ಟರೆ ಸಾಕಷ್ಟು ಪ್ರಮಾಣದ ಅಕ್ಕಿ ದುರುಪಯೋಗವಾಗುವುದು ತಪ್ಪಲಿದೆ ಎಂಬುದು ಇಲಾಖೆಯ ಲೆಕ್ಕಾಚಾರವಾಗಿದೆ.
ಕೇಂದ್ರ ಸರಕಾರ 2,17,403 ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತಿ ತಿಂಗಳು ಕೇವಲ 3 ರೂ. ದರದಲ್ಲಿ ಪೂರೈಸುತ್ತಿದೆ. ಕೇಂದ್ರ ಸರಕಾರವೇ ಒಬ್ಬರಿಗೆ 5 ಕೆಜಿ ಅಕ್ಕಿ ನೀಡುತ್ತಿದೆ. ಇದಕ್ಕೆ ಕೇವಲ 65 ಕೋಟಿ ರೂ. ವೆಚ್ಚವಾಗುತ್ತಿದೆ. ಆದರೆ, ರಾಜ್ಯ ಸರಕಾರ ಹೆಚ್ಚುವರಿಯಾಗಿ ಎರಡು ಕೆಜಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ 29 ರೂ. ದರದಲ್ಲಿ 83 ಸಾವಿರ ಮೆಟ್ರಿಕ್ ಟನ್ ಅಕ್ಕಿ ಖರೀದಿಸಿ ಗ್ರಾಹಕರಿಗೆ ಪೂರೈಸುತ್ತಿದೆ. ಇದರಿಂದ ರಾಜ್ಯ ಸರಕಾರಕ್ಕೆ ಮಾಸಿಕ 190 ಕೋಟಿ ರೂ. ವೆಚ್ಚವಾಗುತ್ತಿದೆ. ಎರಡು ಕೆಜಿ ನಿಲ್ಲಿಸಿದರೂ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುವುದು ತಪ್ಪಲಿದೆ. ಇದರಿಂದ ಸರಕಾರಕ್ಕೆ ವಾರ್ಷಿಕ 2000 ಕೋಟಿ ರೂ. ಉಳಿತಾಯವಾಗಲಿದೆ ಎಂಬುದು ಇಲಾಖೆ ಅಂದಾಜಿಸಿದೆ.
ಈ ನಡುವೆ, ಬಿಪಿಎಲ್ ಕುಟುಂಬ ಸದಸ್ಯರಿಗೆ 5 ಕೆಜಿ ಅಕ್ಕಿ ಜತೆಗೆ, ಕುಟುಂಬಕ್ಕೆ ಒಂದು ಕೆಜಿ ತೊಗರಿ ಬೇಳೆ ನೀಡಲು ಇಲಾಖೆ ಶಿಫಾರಸು ಮಾಡಿದೆ. ಆದರೆ, ಈ ಬಗ್ಗೆ ಸರಕಾರದ ಮಟ್ಟದಲ್ಲಿ ಅಂತಿಮ ತೀರ್ಮಾನವಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾರ್ಚ್ ನಲ್ಲಿ ಮಂಡಿಸಲಿರುವ ಬಜೆಟ್ನಲ್ಲಿ ಈ ವಿಷಯ ಪ್ರಸ್ತಾಪ ಮಾಡಲಿದ್ದಾರೆಯೇ ಎಂಬುದನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 ಕೆಜಿ ಬದಲಿಗೆ 3 ಕೆಜಿ ಅಕ್ಕಿ, 2 ಕೆಜಿ ಗೋಧಿ ಅಥವಾ ರಾಗಿ ಅಥವಾ ಜೋಳ ನೀಡಿದರೂ ಗ್ರಾಹಕರು ಅಕ್ಕಿ ಮಾರಾಟ ಮಾಡುವುದು ತಪ್ಪಲಿದೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುವುದನ್ನು ತಡೆಯಲು ಇದೊಂದು ಕೂಡ ಉತ್ತಮ ಪರಿಹಾರ ಎಂದು ಅವರು ಸೂಚಿಸಿದರು.