“ಗೋ ಗ್ರೀನ್ ವಿದ್ ಮಧುರಾ” ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವ
ಪುತ್ತೂರು : (ಜ.01) ದ.ಕ ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸಮಿತಿ ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಯವರು ಡಿಸೆಂಬರ್ 28 ರಂದು ಮೇನಾಲ, ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನ ವಾರ್ಷಿಕೋತ್ಸವ “ಮಧುರಾ ಆನ್ವಲ್ ಫೆಸ್ಟ್ 2019-20” ಉದ್ಘಾಟನೆಯನ್ನು “ಗೋ ಗ್ರೀನ್ ವಿದ್ ಮಧುರಾ” ಎಂಬ ಮಹತ್ವಪೂರ್ಣ ಪರಿಕಲ್ಪನೆಯೊಂದಿಗೆ ಪರಿಸರವನ್ನು ಬೆಳೆಸಿ ಸಂರಕ್ಷಿಸುವ ಯೋಜನೆಯೊಂದಿಗೆ ಗಿಡಗಳನ್ನು ಪೋಷಕರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶವಾದ ಈ ಮೇನಾಲ ಪ್ರದೇಶದಲ್ಲಿ ಸ್ಮಾರ್ಟ್ ಬೋರ್ಡ್ ಮುಂತಾದ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನೊಳಗೊಂಡ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸ್ಥಾಪನೆಗೊಂಡಿದೆ. ಪೋಷಕರು ಇದರ ಸದುಪಯೋಗವನ್ನು ಪಡೆದುಕೊಂಡು ಸಂಸ್ಥೆಯನ್ನು ಉಳಿಸಿ ಬೆಳೆಸಬೇಕೆಂದರು.
ಈ ವಿದ್ಯಾಸಂಸ್ಥೆ ಇನ್ನೂ ಎತ್ತರಕ್ಕೇರಿ ರಾಜ್ಯದಲ್ಲೇ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಬೇಕು.
ನಮ್ಮ ವಿದ್ಯಾಸಂಸ್ಥೆ, ನಮ್ಮ ಮಕ್ಕಳು ಎಂಬ ಭಾವನೆ ಎಲ್ಲರಲ್ಲೂ ಮೂಡಿ ಬಂದಾಗ ಖಂಡಿತವಾಗಿಯೂ ಈ ವಿದ್ಯಾಸಂಸ್ಥೆ ಅತ್ಯುತ್ತಮ ಮಟ್ಟಕ್ಕೇರಲು ಸಾಧ್ಯ ಎಂದು ಹೇಳಿದರು. ಅದೇ ರೀತಿ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಅಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಸಂಚಾಲಕರಾದ ಅಬುಬಕ್ಕರ್ ರವರ ಪುತ್ರ ಹಾಫೀಝ್ ಕೆ.ಎ ರವರು ಎಲ್ಲಾ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಬೇರೇ ಬೇರೆ ಆಚಾರ-ವಿಚಾರ ಕಲ್ಪನೆಗಳ ಜನರನ್ನು ಒಂದೇ ವೇದಿಕೆಯಲ್ಲಿ ಕುಳ್ಳಿರಿಸುವ ದೊಡ್ಡ ಸಂಭ್ರಮ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆಯುತ್ತಿದೆ. ಇದು ಮೌಲ್ಯಯುತ ಕಾರ್ಯಕ್ರಮಗಳಾಗಿ ಹೊರಹೊಮ್ಮುತ್ತದೆ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ರವರು ಹೇಳಿದರು. ಮಕ್ಕಳಲ್ಲಿ ಭಾವೈಕ್ಯತೆಯ ಸಿಂಚನವನ್ನು ಸುರಿಸುವ ಮಧುರವಾದ ಹನಿಯಾಗಿ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯ ನಿರ್ವಹಿಸುತ್ತಿದೆ.
ಮಧುರಾ ಹನೀಫ್ ರಂತಹ ಯುವ ಉದ್ಯಮಿ ಇತರ ಕ್ಷೇತ್ರಗಳೊಂದಿಗೆ ಪರಿಪೂರ್ಣವಾಗಿ ಆಯ್ದುಕೊಂಡ ಕ್ಷೇತ್ರವಾಗಿದೆ ಮಧುರಾ ಸ್ಕೂಲ್ ಇದು ನಿಜಕ್ಕೂ ಶ್ಲಾಘನೀಯ ಎಂದರು.
ಕಣ್ಣೂರು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ನಿರ್ದೇಶಕರಾದ ಡಾ.ರಾಜೇಶ್ ಬೆಜ್ಜಂಗಳ ರವರು ಮಾತನಾಡಿ ಮಧುರಾದ ಮೂಲಕ ಸಿಹಿ ಕೊಡಲು ಪ್ರಯತ್ನಪಟ್ಟಿರುವ ಈ ಸಂಸ್ಥೆಯ ಸಂಸ್ಥಾಪಕರ ಶ್ರಮ ನಿಜವಾಗಿಯೂ ಅರ್ಥಪೂರ್ಣ ಎಂದು ಹೇಳಿದರು. ಸಂಸ್ಥೆಯ ಸಂಚಾಲಕರಾದ ಕೆ. ಅಬುಬಕ್ಕರ್ ರವರು
ಪುತ್ತೂರು ಪುರಸಭೆಯಲ್ಲಿ ಹಾಗೂ ಆರೋಗ್ಯ ಇಲಾಖೆಯಲ್ಲಿ ಆರೋಗ್ಯಾಧಿಕಾರಿಯಾಗಿ ಸಲ್ಲಿಸಿರುವ ಉನ್ನತ ಸೇವೆಯನ್ನು ವಿವರಿಸುತ್ತಾ ಇಂತಹ ಸಂಚಾಲಕರ ನೇತೃತ್ವದಲ್ಲಿ ನಡೆಯುತ್ತಿರುವ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಶಿಕ್ಷಣ ಎಂಬುವುದು ಉದ್ಯಮವಲ್ಲ. ವರ್ಷದ ಕೊನೆಯಲ್ಲಿ ಸಂಪೂರ್ಣ ನಷ್ಟದಲ್ಲಿರುತ್ತದೆ. ಈ ಸನ್ನಿವೇಶದಲ್ಲಿ ಮಧುರಾ ಹನೀಫ್ ರವರು ಇಂತಹ ಸಾಹಸಮಯ ಕಾರ್ಯವನ್ನು ಧೈರ್ಯದಿಂದ ಆರಂಭಿಸಿರುವುದನ್ನು ಮೆಚ್ಚಲೇಬೇಕೆಂದು ಹೇಳಿದರು.
ದ.ಕ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳಾದ ಡಾ. ಬದ್ರುದ್ದೀನ್ ರವರು ಮಾತನಾಡಿ ಈಶ್ವರಮಂಗಲದ ಈ ಸುಂದರ ಪರಿಸರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಅತ್ಯುತ್ತಮ ಶಿಕ್ಷಣ ನೀಡುವ ಉದ್ದೇಶದಿಂದ “ಮಧುರಾ” ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಮುನ್ನಡೆಸುತ್ತಿರುವ ಮಧುರಾ ಹನೀಫ್ ಹಾಗೂ ಅಬುಬಕರ್ ರವರ ಕಾರ್ಯವು ಪ್ರಶಂಸನೀಯವಾಗಿದೆ ಎಂದು ಹೇಳಿದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀರಾಂ ಪಕ್ಕಳರವರು ಮಾತನಾಡಿ ಬೆಳೆಯುತ್ತಿರುವ ನೆಟ್ಟಣಿಗೆ ಮುಡ್ನೂರು ಗ್ರಾಮಕ್ಕೆ ಈ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಹಿರಿಮೆಯಾಗಿದೆ. ಲೆಫ್ಟಿನೆಂಟ್ ಹಾಫೀಝ್ ರವರಂತೆ ಮುಂಬರುವ 2034 ರಲ್ಲಿ ಮಧುರಾ ಸ್ಕೂಲ್ ನ ಕನಿಷ್ಟ ಇಬ್ಬರು ವಿದ್ಯಾರ್ಥಿಗಳಾದರೂ ಭಾರತೀಯ ಸೇನೆ, ನೌಕಾಪಡೆ, ಅಥವಾ ವಾಯುಪಡೆಗೆ ಆಯ್ಕೆಯಾಗಿ ಕೀರ್ತಿಯನ್ನು ತರಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕರಾದ ಕೆ. ಅಬುಬಕರ್ ಹಾಜಿ ಯವರು ಸಂಸ್ಥೆಯು ಹುಟ್ಟಿ ಬಂದ ಬಗ್ಗೆ, ಉದ್ದೇಶ, ಸಂಸ್ಥೆಯ ಗುರಿ, ರೂಪುರೇಶೆ ಹಾಗೂ ಸಂಸ್ಥೆಯ ಆಶಯಗಳನ್ನು ವಿವರಿಸಿದರು. ಇಂಗ್ಲೀಷ್ ಭಾಷೆ ಅತ್ಯಾವಶ್ಯಕವಾದ ಈ ಆಧುನಿಕ ಯುಗದಲ್ಲಿ ನಮ್ಮ ಸಂಸ್ಥೆಯ ಪ್ರತೀ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿಯೇ ಸಂವಹನ ನಡೆಸುತ್ತಿದ್ದಾರೆ. ಜೊತೆಗೆ ಕನ್ನಡ ಭಾಷೆಗೂ ನಾವು ಪ್ರಾಶಸ್ತ್ಯ ವನ್ನು ನೀಡುತ್ತಿದ್ದೇವೆ. ಈ ಸಂಸ್ಥೆಯ ರೂವಾರಿ ಹನೀಫ್ ಮಧುರಾರವರ ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸ ಈ ಸಂಸ್ಥೆಯ ಹುಟ್ಟಿಗೆ ಮುಖ್ಯ ಕಾರಣ ಎಂದು ಹೇಳಿದರು. ಹಾಗೆಯೇ ಪ್ರತಿಯೊಬ್ಬರ ಸಹಕಾರ ಸಲಹೆ ಮಾರ್ಗದರ್ಶನಗಳು ನಮಗೆ ಸ್ಪೂರ್ತಿಯಾಗಿದೆ. ಮುಂದೆಯೂ ಎಲ್ಲರ ಸಹಕಾರ ನಿರಂತರವಾಗಿರಲಿ ಎಂದು ಅವರು ಹೇಳಿದರು.
ಮಧುರಾ ಎಜುಕೇಷನಲ್ ಟ್ರಸ್ಟ್ ನ ಸ್ಥಾಪಕ ಟ್ರಸ್ಟಿಗಳಾದ ಡಿ. ಎ. ಖಾದರ್ ಹಾಜಿ ಮಧುರಾ, ಸಂಸ್ಥೆಯ ಅಧ್ಯಕ್ಷರಾದ ಹನೀಫ್ ಮಧುರಾ, ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಜಾವೇದ್ ಇಬ್ರಾಹಿಂ, ಅಹ್ಮದ್ ಕಬೀರ್, ಅಹ್ಮದ್ ಶಹಿಯಾ, ಲೆಫ್ಟಿನೆಂಟ್ ಹಾಫೀಝ್ ಕೆ.ಎ, ಸಲಹಾ ಸಮಿತಿಯ ಸದಸ್ಯರಾದ ಕೆ.ಎಂ ಮಹಮ್ಮದ್ ಕುಂಞಿ, ರಾಷ್ಟ್ರ ಪ್ರಶಸ್ತಿ ವಿಜೇತೆ ನಿವೃತ್ತ ಮುಖ್ಯ ಶಿಕ್ಷಕಿ ಸರೋಜಿನಿ ಟೀಚರ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಸುಮಿತಾ ಅಜಿತ್, ಸದಸ್ಯರಾದ ಮಂಜುನಾಥ ರೈ, ಕ್ಯಾಂಪಸ್ ನಿರ್ದೇಶಕರಾದ ಅಬ್ದುಲ್ಲಾ ಮಧುರಾ, ಆಡಳಿತಾಧಿಕಾರಿ ಮಹಮ್ಮದ್ ಸಾಮು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಿ.ಎ ಖಾದರ್ ಹಾಜಿ ಮಧುರಾ ರವರು ಧ್ವಜಾರೋಹಣವನ್ನು ನೆರವೇರಿಸಿದರು. ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್ ಕೆ ವಾರ್ಷಿಕ ವರದಿ ವಾಚಿಸಿದರು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಆಡಳಿತಾಧಿಕಾರಿ ಮಹಮ್ಮದ್ ಸಾಮು ವಂದಿಸಿದರು. ಡಿ ಝೋನ್ ಮೀಡಿಯಾ ಕಡಬ ಇದರ ಆಡಳಿತ ನಿರ್ದೇಶಕರಾದ ಶರೀಫ್ ಕಡಬ ಕಾರ್ಯಕ್ರಮ ನಿರೂಪಿಸಿದರು.
ತನ್ನ ಹೆತ್ತವರು ನೀಡಿದ ಪಾಕೆಟ್ ಮನಿಯಿಂದ ಪ್ರಾಜೆಕ್ಟರನ್ನು ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಗೆ ನೀಡಿದ ಅಂಬಿಕಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ ಯು ಸಿ ವಿದ್ಯಾರ್ಥಿನಿ ನಶಿತಾ ಅಬ್ದುಲ್ ಖಾದರ್ ರವರನ್ನು ಅಭಿನಂದಿಸಲಾಯಿತು. ಮಧುರಾ ಎಜುಕೇಷನಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಹಮ್ಮದ್ ಮಧುರಾ, ಟ್ರಸ್ಟಿ ಖತೀಜಮ್ಮ ಮಧುರಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮಮತಾ, ಶಿಕ್ಷಕಿಯರಾದ ಶ್ರೀ ಪ್ರಿಯಾ, ಅರ್ಚನಾ, ರೇಷ್ಮಾ, ಅಶ್ವಿನಿ, ನಿಶಾನ, ಶಿಕ್ಷಕೇತರ ವೃಂದದವರಾದ ಹನ್ನತ್, ರೋಹಿಣಿ, ಇಬ್ರಾಹಿಂ ಬಡಗನ್ನೂರು, ಸುಶೀಲಾ, ರೋಹಿಣಿ, ಇಬ್ರಾಹಿಂ, ರಿತೇಶ್, ಇಸ್ಮಾಯಿಲ್, ರಾಮ್ ಲಖನ್, ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಆಡಳಿತ ಸಮಿತಿ ಸದಸ್ಯರು, ರಕ್ಷಕ-ಶಿಕ್ಷಕ ಸಮಿತಿ ಸದಸ್ಯರು ಹಾಗೂ ಸಲಹಾ ಸಮಿತಿ ಸದಸ್ಯರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಿತು.