ದೇಶಾದ್ಯಂತ ಸಂಭ್ರಮದ ರಾಮೋತ್ಸವಕ್ಕೆ ವಿಎಚ್ಪಿ ತೀರ್ಮಾನ
ಹೊಸದಿಲ್ಲಿ : (ಜ.01) ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಪ್ರಕ್ರಿಯೆಯಲ್ಲಿ ಜನರ ಸಹಭಾಗಿತ್ವ ಪ್ರೇರೇಪಿಸುವ ಉದ್ದೇಶದೊಂದಿಗೆ ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ‘ರಾಮೋತ್ಸವ’ ಆಚರಿಸಲು ನಿರ್ಧರಿಸಿದೆ.
ಸುಪ್ರೀಂ ತೀರ್ಪು ದೇಶವಾಸಿಗಳಲ್ಲಿ ಹುಮ್ಮಸ್ಸು ತಂದಿದೆ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಸಹಕಾರ ಹಾಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶಗಳನ್ನು ಇಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಜನರಲ್ಲಿಅರಿವು ಮೂಡಿಸುವ ಉದ್ದೇಶದೊಂದಿಗೆ ದೇಶದ ಹಳ್ಳಿ ಹಳ್ಳಿಗಳಲ್ಲೂ ರಾಮೋತ್ಸವ ಆಯೋಜಿಸಲು ವಿಎಚ್ಪಿ ನಿರ್ಧಾರ ಕೈಗೊಂಡಿದೆ.
ಮಂಗಳೂರಿನಲ್ಲಿ ಮುಕ್ತಾಯಗೊಂಡ ಮೂರು ದಿನಗಳ ಸಭೆ ನಂತರ ವಿಎಚ್ಪಿಯಿಂದ ಇಂತಹದ್ದೊಂದು ಪ್ರಕಟಣೆ ಹೊರಬಿದ್ದಿದೆ. ಇದೇ ವೇಳೆ ವಿಎಚ್ಪಿಯು, ಅಲ್ಪಸಂಖ್ಯಾತರ ಹಿತರಕ್ಷಣೆ ಕಾಯುವ ಸಂವಿಧಾನದ 29 ಹಾಗೂ 30ನೇ ವಿಧಿಗೆ ತಿದ್ದುಪಡಿ ತಂದು ಆ ಮೂಲಕ ಈ ವಿಧಿ ಕಲ್ಪಿಸುವ ವಿಶೇಷ ಸೌಕರ್ಯಗಳನ್ನು ಸಮಾಜದ ಎಲ್ಲವರ್ಗಗಳಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂದೂ ಆಗ್ರಹಿಸಿದೆ.
ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಮುಂದುವರಿದಿರುವ ಮಧ್ಯೆಯೇ ವಿಎಚ್ಪಿ ಯಿಂದ ಇಂತಹದ್ದೊಂದು ಆಗ್ರಹ ಕೇಳಿಬಂದಿರುವುದು ಗಮನಾರ್ಹವಾಗಿದೆ. ಹಿಂದೂ ಸಂಸ್ಕೃತಿಗೆ ಅವಮಾನ ತೋರುವ ಹಾಗೂ ಮಾರಾಟದ ಸರಕಾಗಿ ಹೆಣ್ಣನ್ನು ಕೀಳಾಗಿ ತೋರಿಸುವ ಸಿನಿಮಾಗಳು, ಜಾಹೀರಾತುಗಳು ಹಾಗೂ ಧಾರಾವಾಹಿಗಳನ್ನು ನಿಷೇಧಿಸುವಂತೆ ಸರಕಾರವನ್ನು ಆಗ್ರಹಿಸಿದೆ.