ಡಿಸೆಂಬರ್ 28 “ಶಾಂತಿ”ನಗರ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ಳಿಹಬ್ಬ ಸಂಭ್ರಮ
ಪುತ್ತೂರು : ( ಡಿ.27) ಸಮಾಜಕ್ಕೆ ಮಾದರಿಯಾದ ಹಿಂದು , ಮುಸ್ಲಿಂ ಹಾಗೂ ಕ್ರೈಸ್ತ ಎಂಬ ಭೇದ ಭಾವವಿಲ್ಲದೆ ಅನೇಕ ಮಕ್ಕಳಿಗೆ ಶಾಂತಿ ಮತ್ತು ಶೈಕ್ಷಣಿಕ ವಿಚಾರಧಾರೆಯನ್ನು ಉಣಬಡಿಸಿದ ಶಾಂತಿ ಸುವ್ಯವಸ್ಧೆಗೆ ಹೆಸರಾದ ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯು 25ರ ರಜತ ಸಂಭ್ರಮದಲ್ಲಿದೆ.
ರಜತ ಸಂಭ್ರಮವು ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣಕನ್ನಡ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಬೆಳ್ಳಿಹಬ್ಬ ಸಮಿತಿ, ಹಿರಿಯ ವಿಧ್ಯಾರ್ಥಿ ಸಂಘ ಹಾಗೂ ದ.ಕ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಇದರ ಜಂಟಿ ಆಶ್ರಯದಲ್ಲಿ ಡಿಸೆಂಬರ್ 28 ರಂದು ಶನಿವಾರ ನಡೆಯಲಿದೆ. ಕಾರ್ಯಕ್ರಮಕ್ಕೆ ಕೋಡಿಂಬಾಡಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಗಣೇಶ್ ಧ್ವಜರೋಹಣ ಮಾಡುವ ಮುಖಾಂತರ ಚಾಲನೆ ನೀಡಲಿದ್ದಾರೆ, ಸ್ಥಳೀಯ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರಾದ ಯು.ಜಿ ರಾಧಾ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಕ್ರೀಡಾಕೂಟದ ವಿಜೇತರಿಗೆ ಡಿವೈಎಸ್ಪಿ ದಿನಕರ ಶೆಟ್ಟಿ ಬಹುಮಾನ ವಿತರಣೆ ಮಾಡಲಿದ್ದು, 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಆಸ್ಕರ್ ಆಲಿ ಮಾಜಿ ಎಸ್ ಡಿಎಂಸಿ ಅಧ್ಯಕ್ಷರುಗಳಿಗೆ ಗೌರವಾರ್ಪಣೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರುಗಳಾದ ಹಾಜಿ ಶೇಖಬ್ಬ ಎನ್, ಯಮುನಾ, ಸತ್ಯವತಿ ಹಾಗೂ ವಿದ್ಯಾಮಾತ ಫೌಂಡೇಶನ್ ನ ಮುಖ್ಯಸ್ಥ ಭಾಗ್ಯೇಶ್ ರೈ ಭಾಗಿಯಾಗಲಿದ್ದಾರೆ. ಶಿಕ್ಷಣ ಸಂಪನ್ಮೂಲ ಕೇಂದ್ರ ದ ಕ್ಷೇತ್ರ ಸಮಾನ್ವಯಧಿಕಾರಿ ಮೋನಪ್ಪ ಪೂಜಾರಿ, ಬೆಳ್ಳಿಹಬ್ಬ ಸಮಿತಿ ಗೌರವಧ್ಯಕ್ಷ ಡಾ| ಬಿ. ರಘು,ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ರಾಜೇಶ್ ಶಾಂತಿನಗರ ವೇದಿಕೆಯಲ್ಲಿ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದಲ್ಲಿ ಅಡುಗೆ ಸಿಬ್ಬಂದಿಗಳಿಗೆ ಗೌರವರ್ಪಣೆ ನಡೆಯಲಿದೆ. ತದನಂತರ ಸ್ಥಳೀಯರಿಗೆ, ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಛದ್ಮವೇಶ ಸ್ಪರ್ಧೆ ಏರ್ಪಡಿಸಲಾಗಿದೆ.
ಸಂಜೆ ನಡೆಯುವ ರಜತ ಸಂಭ್ರಮದ ಸಭಾ ಕಾರ್ಯಕ್ರಮ ದ ಮೊದಲು ಅಂಗನವಾಡಿ ಪುಟಾಣಿಗಳು, ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನಂತರ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆಯಲಿರುವ ರಜತ ಸಂಭ್ರಮದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ನೆರವೇರಿಸಲಿದ್ದಾರೆ. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಮತ್ತು ಅತಿಥಿ ಶಿಕ್ಷಕರಿಗೆ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೊರ್ಕರ್ ಗೌರವರ್ಪಣೆ ಸಲ್ಲಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ಅನಿತ ಹೇಮನಾಥ್ ಶೆಟ್ಟಿಯವರು ಶಾಲೆಯ ಸ್ಥಾಪನೆಗೆ ಶ್ರಮಿಸಿದ್ಧ ಪ್ರಮುಖರಿಗೆ ಗೌರವಾರ್ಪಣೆ ಸಲ್ಲಿಸಲಿದ್ದಾರೆ. ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಯತೀಶ್ ಉಳ್ಳಾಲ್ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಶ್ರೀ ವಿನಯ ಕುಮಾರ್ ಸೊರಕೆ, ಸ್ಥಳೀಯ ಜಿಲ್ಲಾಪಂಚಾಯತ್ ಸದಸ್ಯೆ ಶ್ರೀಮತಿ ಶಯನ ಜಯಾನಂದ್, ತಾಲೂಕು ಪಂಚಾಯತ್ ಸ್ಧಾಯಿ ಸಮಿತಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಉಧ್ಯಮಿ ಅಶೋಕ್ ಕುಮಾರ್ ರೈ, ತಾಲೂಕು ಪಂಚಾಯತ್ ಸದಸ್ಯೆ ಸುಜಾತ ಕೃಷ್ಣ ಆಚಾರ್ಯ, 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರತಿ ಎಸ್. ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಭಾಗವಹಿಸಲಿದ್ದಾರೆ.ಬೆಳ್ಳಿಹಬ್ಬ ಸಮಿತಿಯ ಗೌರವಧ್ಯಕ್ಷ ಡಾ| ಬಿ. ರಘು , ಸಮಿತಿ ಅಧ್ಯಕ್ಷ ರಾಜೇಶ್ ಶಾಂತಿನಗರ, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಉಷಾ ವೇದಿಕೆಯಲ್ಲಿ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ನಂತರ ಕೀರ್ತಿಶೇಷ ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದೊಂದಿಗೆ ನಡೆದು ಬಂದ “ಬಾರಿಸು ಕನ್ನಡ ಡಿಂಡಿಮವ” ತಂಡದಿಂದ ಹಾಡು ಮತ್ತು ನೃತ್ಯಗಳ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ತದನಂತರ ಹಿರಿಯ ವಿಧ್ಯಾರ್ಥಿಗಳು ಹಾಗೂ ಊರವರಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ತುಳು ನಾಟಕ “ಅಜ್ಜಿಗ್ ಏರ್ಲಾ ಇಜ್ಜಿ” ನಡೆಯಲಿದೆ ಎಂದು ಬೆಳ್ಳಿಹಬ್ಬ ಸಮಿತಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.