ಉತ್ತರದಿಂದ ದಕ್ಷಿಣಕ್ಕೆ ಗುರಿಯಿಲ್ಲದ ನಡಿಗೆ, ಸ್ನೇಹಮನೆಯ ಮತ್ತೊಂದು ತ್ಯಾಗಮಯಿ ಪುಟ
ಮಂಜೇಶ್ವರ : (ನ.18) ಪೂರ್ಣಮತಿ ವಿಕಲನಾಗಿ ದೇಶದ ಉತ್ತರದಿಂದ ದಕ್ಷಿಣದ ವರೆಗೆ ಆತ ತಿರುಗಾಡಿದ್ದು ಸರಿಸುಮಾರು ಆರು ಸಂವತ್ಸರ. ಆದರೆ, ದೇವರ ಕರೆ ಎಂಬಂತೆ ಕೊನೆಗೆ ಮಂಗಳೂರಿನಲ್ಲಿ ಬಂದು ಬಿದ್ದುದರಿಂದಲೇ ಆ ಯುವಕನೀಗ ಮತಿವಂತನಾಗಿ ಸುಂದರ ಬದುಕು ರೂಪಿಸುವಂತಾದ ಎಂದರೆ ತಪ್ಪಲ್ಲ; ಅತಿಶಯೋಕ್ತಿಯೂ ಅಲ್ಲ.
ಇದೇ ಕಳೆದ ಎಪ್ರಿಲ್ 20. ಸುಮಾರು 30 ರ ಹರೆಯದ ಯುವಕನೋರ್ವ ಮಂಗಳೂರು ನಗರದ ಬೀದಿಗಳಲ್ಲಿ ಕೆಲವಾರು ದಿನಗಳಿಂದ ತಿರುಗಾಡುತ್ತಿರುವ ಬಗ್ಗೆ ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರಕ್ಕೆ ಮಾಹಿತಿ ದೊರೆಯುತ್ತದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ನೇಹಾಲಯದ ಸೇವಾ ಕಾರ್ಯಕರ್ತರು ತಮ್ಮ ವಾಹನದಲ್ಲಿ ಅತ್ತ ತೆರಳುತ್ತಾರೆ. ಆ ಯುವಕನ ಅವಸ್ಥೆ ತೀರಾ ಬಿಗಡಾಯಿಸಿತ್ತು. ಆತ ಸೊರಗಿ ಹೋಗಿದ್ದ. ವರ್ಷಗಳಿಂದ ನೀರು ಕಾಣದ ದೇಹ ದುರ್ನಾತ ಬೀರುತ್ತಿತ್ತು. ಕೊಳಕು ಚಿಂದಿ ಬಟ್ಟೆ , ಗಡ್ಡ, ಕೂದಲು ಇಳಿಬಿಟ್ಟಿದ್ದ. ಹೇಸಿಗೆ ಹುಟ್ಟಿಸುವ ರೂಪ. ಏನೇನೋ ಗೊಣಗಾಡುತ್ತಿದ್ದ. ಗಾಡಿಯೇರಿಸುವಾಗ ಪ್ರತಿರೋಧ ಒಡ್ಡಿದನಾದರೂ ಆತನನ್ನು ಮಣಿಸುವುದು ಕಷ್ಟವಾಗಲಿಲ್ಲ. ಆ ದಿನ ಸ್ನೇಹ ಮಂದಿರದಲ್ಲಿ ಪೂರ್ಣ ವಿಶ್ರಾಂತಿಗೆ ಬಿಟ್ಟು ಮಾರನೇ ದಿನ ಮಂಗಳೂರಿನ ಯೇನಪೋಯ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಲಾಯಿತು. ಮೂರು ವಾರಗಳ ಮಲಗು ಚಿಕಿತ್ಸೆ ಈಗ ಆತನ ಚಿತ್ತಕ್ಷೊಭೆಗೆ ಶಮನವಾಗಿದೆ.
ಶೀಘ್ರ ಗುಣಮುಖನಾಗುವುದಾಗಿ ತಿಳಿಸಿದ ವೈದ್ಯರು ಒಂದಷ್ಟು ಔಷಧಿಯನ್ನೂ ನಿರ್ದರಿಸಿದ್ದರು. ಸ್ನೇಹಾಲಯಕ್ಕೆ ಮರಳಿಸಿ ಸೂಚಿತ ಚಿಕಿತ್ಸೆ ಮುಂದುವರಿಕೆ. ಆ ಸ್ನೇಹಮಯಿ ಪರಿಸರದಲ್ಲಿ ಆತ ಎಲ್ಲರ ಜೊತೆ ಬೆರೆಯತೊಡಗಿದ, ಆಟೋಟ, ಯೋಗ, ಆಪ್ತ ಸಮಾಲೋಚನೆಗಳಲ್ಲಿ ಭಾಗಿಯಾಗುತ್ತಿದ್ದಂತೆ ರೋಗಾವಸ್ಥೆಯ ಎಲ್ಲ ಏರುಪೇರುಗಳನ್ನೂ ದಾಟಿ ಸಹಜ ಸುಂದರ ಯುವಕನಾಗಿ ಮಾರ್ಪಡಾದ. ಸ್ಮರಣಾ ಪಟಲದಲ್ಲಿ ಮನೆ ವಿಳಾಸವು ಸರಿಯಾಗಿ ಮೂಡಿ ಬರಲಿಲ್ಲವಾದರೂ ಉಳಿದೆಲ್ಲವನ್ನು ಜ್ಞಾಪಸಿದಾತ ಊರಿಗೆ ಮರಳುವ ಹಂಬಲ ವ್ಯಕ್ತಪಡಿಸಿದ. ಹಾಗೆ, ಆತನನ್ನು ಮುಂಬಯಿಯ ಶ್ರದ್ಧಾ ಪುನಶ್ಚೇತನ ಕೇಂದ್ರಕ್ಕೆ ವಗರ್ಾಯಿಸಲಾಗಿ ಅಲ್ಲಿಂದ ವಿಳಾಸ ಪತ್ತೆ ಹಚ್ಚಿ ಮನೆಗೆ ಮರಳಿಸಲಾಯಿತು.
ಆತನ ಹೆಸರು ಸುರೇಶ, 30 ರ ಹರೆಯ. ಉತ್ತರಪ್ರದೇಶದ ಶ್ರವಾಸಿ ಜಿಲ್ಲೆಯ ಭಿಂಗಾ ತಾಲೂಕು ನಿವಾಸಿ. ಅವಿವಾಹಿತ, ಮಧ್ಯಮ ವರ್ಗ ಕುಟುಂಬ. ಎಂಟು ವರ್ಷಗಳ ಹಿಂದೆ ಮಾನಸಿಕ ಖಿನ್ನತೆ ಬಾಧಿಸಿದ ಸುರೇಶನಿಗೆ ಭಿಂಗಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗಿರುವಾಗ ದಿಢೀರನೆ ಆತನ ತಾಯ್ತಂದೆಯರು ಮರಣವಪ್ಪುತ್ತಾರೆ.
ತಂದೆಯ ಅಗಲಿಕೆಯು ಆತನನ್ನು ತೀವ್ರವಾಗಿ ಕಾಡುತ್ತದೆ ಮುಂದೆ, ಮನೆಯವರಿಂದ ನಿಯಂತ್ರಿಸಲಾರದ ಅವಸ್ಥೆ ಆತ ಪೂರ್ಣ ಮತವಿಕಲನಾಗುತ್ತಾನೆ. ಆರು ವರ್ಷಗಳ ಹಿಂದೆ ಮನೆಯಿಂದ ಹೊರಟ ಅಣ್ಣನನ್ನು ಈಗ ನೋಡುತ್ತಿರುವೆ ಎಂದು ಸುರೇಶನನ್ನು ತಬ್ಬಿಕೊಂಡು ಸಹೋದರ ಬಿಕ್ಕಿ ಬಿಕ್ಕಿ ಅಳುತ್ತಿರುವಾಗ ಕರೆದೊಯ್ದ ಶ್ರದ್ಧಾ ಕಾರ್ಯಕರ್ತರ ಕಣ್ಣುಗಳೂ ತೇವಗೊಂಡಿದ್ದುವು. ಹಾಗೆ, ಉತ್ತರಪ್ರದೇಶದ ಸುರೇಶನ ಬದುಕು ಮಂಜೇಶ್ವರದ ಸ್ನೇಹಾಲಯದ ಅಭಯದಿಂದಾಗಿ ಹಸನಾಗುತ್ತದೆ.