ಶಿಕ್ಷಣ ಕ್ಷೇತ್ರದ ಸಮಸ್ಯೆ ನಿವಾರಿಸುವಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವಿಫಲ : ಸವಾದ್ ಸುಳ್ಯ
ಮಂಗಳೂರು : (ಮೇ.19) ಶಿಕ್ಷಣ ಸಚಿವರು ಪರೀಕ್ಷೆ ಮತ್ತು ಶಾಲಾ ಕಾಲೇಜುಗಳ ಕುರಿತು ದಿನಕ್ಕೊಂದು ಗೊಂದಲಕ್ಕಾರಿ ಹೇಳಿಕೆ ನೀಡಿ ಇಡೀ ಶಿಕ್ಷಣ ಕ್ಷೇತ್ರದ ಬಗ್ಗೆ ಜನರು ಮತ್ತು ವಿದ್ಯಾರ್ಥಿಗಳ ನಡುವೆ ಗೊಂದಲವನ್ನುಂಟು ಮಾಡಿದ್ದಾರೆ. ಶಿಕ್ಷಣ ಇಲಾಖೆ ಬುದ್ಧಿ, ಯೋಚನೆ ಮತ್ತು ಕ್ರಿಯಾಶೀಲವಾಗಿ ಯೋಚಿಸುವ ಮನಸ್ಸನ್ನು ಕಳೆದುಕೊಂಡಿದ್ದು, ಜವಾಬ್ದಾರಿ ಇಲ್ಲದ ಇಲಾಖೆಯಂತೆ ವರ್ತಿಸುತ್ತಿದೆ ಎಂದು ದ.ಕ.ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ಸವಾದ್ ಸುಳ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾ ಮೂರನೇ ಅಲೆಯ ಮುನ್ಸೂಚನೆಯಿಂದ ದ್ವಿತೀಯ ಪಿಯು ಪರೀಕ್ಷೆಯ ಬಗ್ಗೆ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಭಯ ಮತ್ತು ಆತಂಕ ಉಂಟಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿ ಅಥವಾ ಇಲಾಖೆ ವಾರದೊಳಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಪ್ರಶ್ನೆಕೋಶವನ್ನು ಅಥವಾ 3 ರಿಂದ 4 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡಬೇಕು. ಈ ಪ್ರಶ್ನೆಕೋಶ ಅಥವಾ ಮಾದರಿ ಪ್ರಶ್ನೆ ಪತ್ರಿಕೆಗಳ ಉತ್ತರವನ್ನು ಅಧ್ಯಯನ ಮಾಡಲು ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದು, ಅವರನ್ನು ಪರೀಕ್ಷೆಗೆ ತಯಾರು ಮಾಡಲು ಇಲಾಖೆ ಪ್ರಯತ್ನಿಸಬೇಕೆಂದು ಆಗ್ರಹಿಸಿದ್ದಾರೆ.

Advertisement
ಶಿಕ್ಷಣ ಕ್ಷೇತ್ರ ಸಮವರ್ಥಿ ಪಟ್ಟಿಯಲ್ಲಿ ಬರುವ ಕ್ಷೇತ್ರ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಇಡೀ ದೇಶದ ಶಿಕ್ಷಣ ಕ್ಷೇತ್ರದ ಜಬಾಬ್ದಾರಿಯನ್ನು ಪರೋಕ್ಷವಾಗಿ ಹೊತ್ತಿರುವ ಇಲಾಖೆಯೂ ಹೌದು. ಈ ರೀತಿ ಇರುವಾಗ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮಂತ್ರಿಯವರು ಎಲ್ಲಾ ರಾಜ್ಯದ ಶಿಕ್ಷಣ ಮಂತ್ರಿಗಳ ಸಭೆ ಕರೆದು ಕೋವಿಡ್ ಸಂದರ್ಭದಲ್ಲಿ ದೇಶದ ಶೀಕ್ಷಣ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳಿಗೆ ಏಕ ರೂಪ ಪರಿಹಾರವನ್ನು ಹುಡುಕುವ ಕೆಲಸ ಏಕೆ ಮಾಡಿಲ್ಲ. ಹಾಗಾದರೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಇರುವದು ಯಾಕೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.