ಮಕ್ಕಳ ಹಕ್ಕುಗಳ ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಾಗಾರಕ್ಕೆ ಹಾರಾಡಿ ಶಾಲಾ ವಿದ್ಯಾರ್ಥಿಗಳು ಆಯ್ಕೆ
ಪುತ್ತೂರು : ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಹಾಗೂ ಯುನಿಸೆಫ್ ಸಹಯೋಗದಲ್ಲಿ ನಡೆಯಲಿರುವ ರಾಷ್ಟ್ರೀಯ ಮಕ್ಕಳ ನೀತಿ 2013 ಮತ್ತು ಮಕ್ಕಳ ಹಕ್ಕುಗಳ ಒಡಂಬಡಿಕೆಗಳ ಪರ್ಯಾಯ ವೇದಿಕೆಯಲ್ಲಿ ಕುರಿತಾದ ರಾಜ್ಯಮಟ್ಟದ ಸಮಾಲೋಚನಾ ಕಾರ್ಯಾಗಾರದಲ್ಲಿ ಭಾಗವಹಿಸಲು ಹಾರಾಡಿ ಶಾಲಾವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದ್ದು ಶಾಲಾ ಸಂಸತ್ ನ ನಾಯಕಿ ಅಭಿಲಾಷಾ ದೋಟ ಹಾಗೂ ಸ್ಪೀಕರ್ ಬಿ.ಪವಿತ್ ಯು.ರೈ ಪಾಲ್ಗೊಳ್ಳಲಿದ್ದಾರೆ.
ಭಾರತ ಸರಕಾರವು ರಾಷ್ಟ್ತದ ಮಕ್ಕಳ ಉಳಿವು, ಅಭಿವೃದ್ಧಿ, ಶಿಕ್ಷಣ, ರಕ್ಷಣೆ ಇವರ ಮೊದಲಾದ ವಿಚಾರಗಳನ್ನು ಒಳಗೊಂಡ ತಮ್ಮ ರಾಷ್ಟ್ರೀಯ ನೀತಿಯನ್ನು 2013 ರಲ್ಲಿ ಪ್ರಕಟಿಸಿ ಜಾರಿಗೆ ತಂದಿತ್ತು. ಈ ಕುರಿತಾದ ವರದಿಯನ್ನು ವಿಶ್ವಸಂಸ್ಥೆಗೂ ಭಾರತದ ವತಿಯಿಂದ ನೀಡುವ ಯೋಜನೆಯಿದ್ದು ಮುಂದಿನ 2020 ರ ಅವಧಿಗೆ ಈ ವರದಿಯನ್ನು ಸಲ್ಲಿಸಬೇಕಿದೆ. ಈ ಕುರಿತಾಗಿ ಕರ್ನಾಟಕ ರಾಜ್ಯದ ವ್ಯಾಪ್ತಿಯ ರಾಜ್ಯಮಟ್ಟದ ಸಮಾಲೋಚನಾ ಸಭೆಯನ್ನು ಇದೇ ಸಪ್ಟೆಂಬರ್ 30 ಹಾಗೂ ಅಕ್ಟೋಬರ್1 ರಂದು ಬೆಂಗಳೂರಿನ ಐ.ಎಸ್.ಎ ಬೆನ್ಸ್ ನ್ ಟೌನ್ ಇಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ಪ್ರತಿ ಜಿಲ್ಲೆಯಿಂದ ಇಬ್ಬರು ಮಕ್ಕಳು ಹಾಗೂ ಒಬ್ಬ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿ ಭಾಗವಹಿಸಬೇಕಾಗಿದೆ.
ದಕ್ಷಿಣಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶವನ್ನು ವೆಲೋರೆಡ್ ಹಾಗೂ ಪಡಿ ಶಿಕ್ಷಣಸಂಸ್ಥೆ ಮಂಗಳೂರು ಇವರು ಪುತ್ತೂರು ತಾಲೂಕಿನ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೀಡಿದ್ದು, ಶಾಲಾ ಸಂಸತ್ತಿನ ನಾಯಕಿ ಅಭಿಲಾಷಾ ದೋಟ ಹಾಗೂ ಸಂಸತ್ ಸ್ಪೀಕರ್ ಬಿ. ಪವಿತ್ ಯು.ರೈ ಭಾಗವಹಿಸಲಿದ್ದಾರೆ.
ಪ್ರಸಕ್ತ ಸಾಲಿನ ಶಾಲಾ ಸಂಸತ್ ನ ಕಳೆದ ಮಳೆಗಾಲದ ಅಧಿವೇಶನವನ್ನು ವಿದ್ಯಾರ್ಥಿಗಳು ಸಮರ್ಥವಾಗಿ ನಿರ್ವಹಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಕ್ಕಿಂತಲೂ ಅಧಿಕ ವೀಕ್ಷಕರಿಂದ ವೀಕ್ಷಣೆಗೊಳಗಾಗಿತ್ತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಇಂತಹ ವಿಶೇಷ ಅವಕಾಶ ದೊರೆತಿದೆ. ಅಭಿಲಾಷಾ ದೋಟ ಇವರು ತೋಟಗಾರಿಕಾ ಇಲಾಖೆಯ ಉದ್ಯೋಗಿ ಲಕ್ಷ್ಮಣ ದೋಟ ಹಾಗೂ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿರುವ ಡಾ.ಸ್ಮಿತಾ ಪಿ.ಜಿ ಇವರ ಪುತ್ರಿಯಾಗಿದ್ದಾರೆ. ಬಿ.ಪವಿತ್ ಯು.ರೈ ಇವರು ಮೆಸ್ಕಾಂ ಉದ್ಯೋಗಿ ಬನ್ನೂರು ಉದಯ ಕುಮಾರ್ ರೈ ಹಾಗೂ ಹಾರಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಪ್ರತಿಮಾ ಯು.ರೈ ಇವರ ಪುತ್ರನಾಗಿದ್ಸು ಇಬ್ಬರೂ ವಿದ್ಯಾರ್ಥಿಗಳು ಹಾರಾಡಿ ಶಾಲೆಯ ಎಂಟನೇ ತರಗತಿಯ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ.ವಿದ್ಯಾರ್ಥಿಗಳ ಜೊತೆ ಸ್ವಯಂಸೇವಾ ಸಂಘಟನೆಯ ವತಿಯಿಂದ ಶ್ರೀಮತಿ ಪ್ರತಿಮಾ ಯು.ರೈ ಭಾಗವಹಿಸಲಿದ್ದಾರೆ.