ವಿದ್ಯಾರ್ಥಿ ವೇತನ, ಸಾಲದ ಮೊತ್ತ ತಕ್ಷಣ ಮಂಜೂರಾತಿಗೆ NSUI ಪ್ರ.ಕಾರ್ಯದರ್ಶಿ ಸವಾದ್ ಸುಳ್ಯ ಆಗ್ರಹ.
ಮಂಗಳೂರು : (ಮಾ.29) ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ ನಡುವೆ ಇದೀಗ ಕೊರೊನ ವೈರಸ್ ಪ್ರಯುಕ್ತ ಲಾಕ್ ಡೌನ್ ಘೋಷಣೆಯ ಬಳಿಕವಂತೂ ಆರ್ಥಿಕತೆ ಮತ್ತಷ್ಟು ಸ್ತಬ್ದಗೊಂಡಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಅಲ್ಪಸಂಖ್ಯಾತ, ಹಿದುಳಿದವರ್ಗ ಹಾಗು ಪರಿಶಿಷ್ಟ ಜಾತಿ – ಪಂಗಡ ಸೇರಿದಂತೆ ಎಲ್ಲಾ ವಿದ್ಯಾರ್ಥಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿ ವೇತನ ಹಾಗೂ ವಿದ್ಯಾರ್ಥಿ ಸಾಲದ ಮೊತ್ತಗಳನ್ನು ಹಿಂದಿನ ಬಾಕಿ ಹಾಗು ಈ ಬಾರಿಯ ಶೈಕ್ಷಣಿಕ ವರ್ಷದ್ದು ತಕ್ಷಣ ಮಂಜೂರಾತಿಗೆ ಸರಕಾರ ಕ್ರಮ ಕೈಗೊಳ್ಳುವ ಮೂಲಕ ಆರ್ಥಿಕ ಜಂಜಾಟಕ್ಕೆ ಒಂದಷ್ಟು ರಿಲೀಫ್ ನೀಡುವಂತೆ ಎನ್.ಎಸ್.ಯು.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಆಗ್ರಹಿಸಿದ್ದಾರೆ.
ಈಗಾಗಲೇ ಕಳೆದ ಹಾಗೂ ಅದಕ್ಕಿಂತ ಮುಂಚಿನ ಶೈಕ್ಷಣಿಕ ವರ್ಷದ ಪ್ರಿ- ಮೆಟ್ರಿಕ್, ಪೋಸ್ಟ್ ಮೆಟ್ರಿಕ್, ಮೆರಿಟ್ / ಮಿನ್ಸ್ ಸ್ಕಾಲರ್ಶಿಪ್ ಹಾಗೂ ಅರಿವು ಮೊದಲಾದ ಶೈಕ್ಷಣಿಕ ಸಾಲದ ಮೊತ್ತಗಳು ವಿದ್ಯಾರ್ಥಿಗಳಿಗೆ ಮಂಜೂರಾತಿಗೆ ಬಾಕಿ ಇದ್ದು, ತಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೆ ಈ ಎಲ್ಲಾ ಮೊತ್ತಗಳನ್ನು ತಕ್ಷಣ ಮಂಜೂರಾತಿಗೊಳಿಸುವ ಮೂಲಕ ಸರಕಾರ ವಿದ್ಯಾರ್ಥಿಗಳ ಹಾಗೂ ಪೋಷಕರ ಆರ್ಥಿಕ ಜಂಜಾಟಕ್ಕೆ ಮುಕ್ತಿ ನೀಡಬೇಕು. ಆ ಮೂಲಕ ಮುಂದಿನ ಶೈಕ್ಷಣಿಕ ವರ್ಷಕ್ಕಿಂತ ಮುಂಚಿತವಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಸವಾದ್ ಸುಳ್ಯ ರವರು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.