ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ ಹುಡುಕಿಕೊಡಿ ❗ದೆಹಲಿಯಲ್ಲಿ ಪತ್ತೆಯಾದ ಪೋಸ್ಟರ್
ನವದೆಹಲಿ : (ನ.17) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಲ್ಬಣಿಸಿರುವ ವಾಯುಮಾಲಿನ್ಯ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು ಸಂಸದೀಯ ಸಮಿತಿ ಕರೆದಿದ್ದ ಸಭೆಗೆ ಗೈರುಹಾಜರಾದ ಪೂರ್ವ ದೆಹಲಿಯ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧ ಆಮ್ ಆದ್ಮಿ ಪಾರ್ಟಿಯ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ನಡುವೆ ದೆಹಲಿಯ ಐಟಿಒ ಮೆಟ್ರೋ ನಿಲ್ದಾಣದ ಆವರಣದಲ್ಲಿ ಗಂಭೀರ್ ನಾಪತ್ತೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಮನವಿ ಮಾಡಿಕೊಳ್ಳುವ ಭಿತ್ತಿಪತ್ರಗಳು ದಿಢೀರನೆ ಕಾಣಿಸಿಕೊಂಡಿವೆ.
ವ್ಯಂಗಭರಿತವಾದ ಪೋಸ್ಟರ್ನಲ್ಲಿ “ನಾಪತ್ತೆ” ಎಂದು ಕೆಂಪು ಬಣ್ಣದಲ್ಲಿ ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದ್ದು, ಅದಕ್ಕೆ ಹಸನ್ಮುಖಿ ಗಂಭೀರ್ ಫೋಟೋವನ್ನು ಸೇರಿಸಿ ಕೇಂದ್ರ ದೆಹಲಿಯ ಐಟಿಒ ಆವರಣದಲ್ಲಿರುವ ಮರಗಳ ಮೇಲೆ ಅಂಟಿಸಲಾಗಿದೆ. ಗಂಭೀರ್ ಫೋಟೋ ಕೆಳಗೆ ಈ ವ್ಯಕ್ತಿಯನ್ನು ಎಲ್ಲಾದರೂ ನೋಡಿದ್ದೀರಾ? ಕೊನೆಯದಾಗಿ ಅವರು ಇಂದೋರ್ನಲ್ಲಿ ಜಿಲೇಬಿ ತಿನ್ನುತ್ತಿರುವಾಗ ಕಾಣಿಸಿಕೊಂಡಿದ್ದರು. ಇಡೀ ದೆಹಲಿ ಇವರಿಗಾಗಿ ಹುಡುಕಾಡುತ್ತಿದೆ ಎಂದು ಬರೆಯುವ ಮೂಲಕ ಅಣಕಿಸಲಾಗಿದೆ.
ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ವಿರುದ್ಧದ ಮೊದಲನೇ ಟೆಸ್ಟ್ ವೇಳೆ ಗಂಭೀರ್ ವೀಕ್ಷಕ ವಿವರಣೆಗಾರರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಪಂದ್ಯದ ನಡುವೆ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ರೊಂದಿಗೆ ಜಿಲೇಬಿ ತಿನ್ನುತ್ತಿರುವ ಫೋಟೋವನ್ನು ಆಪ್ ಕಾರ್ಯಕರ್ತರು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿ ನಮ್ಮ ಮಾನ್ಯ ಸಂಸದರು ವಾಯುಮಾಲಿನ್ಯ ಕುರಿತಾದ ಸಭೆಗೆ ಗೈರಾಗಿ ಇಲ್ಲಿ ಜಿಲೇಬಿ ತಿನ್ನುತ್ತಿದ್ದಾರೆ ಎಂದು ಟೀಕಿಸಿದ್ದರು.